More

    ಶಿವಮೊಗ್ಗ ದಸರಾದಲ್ಲಿ ಗಮನಸೆಳೆದ ರಂಗ ಜಾಥಾ

    ಶಿವಮೊಗ್ಗ: ರಂಗ ದಸರಾ ಅಂಗವಾಗಿ ಏರ್ಪಡಿಸಿದ ರಂಗ ಜಾಥಾ ಗಮನಸೆಳೆಯಿತು. ಡೊಳ್ಳು ಮತ್ತಿತರ ರಂಗ ಪರಿಕರಗಳೊಂದಿಗೆ ಕಲಾವಿದರು ವಿವಿಧ ರಂಗ ಪೋಷಾಕು ಧರಿಸಿ ಜಾಥಾದಲ್ಲಿ ಹೆಜ್ಜೆ ಹಾಕಿದರು. ಪುಟ್ಟ ಮಕ್ಕಳು ಚಾರಿತ್ರಿಕ ಪಾತ್ರಗಳ ಮೂಲಕ ಗಮನಸೆಳೆದರೆ ಹಿರಿಯ ಕಲಾವಿದರು ಗಂಭೀರ ಪಾತ್ರಗಳ ಧಿರಿಸು ತೊಟ್ಟು ಆಕರ್ಷಿಸಿದರು.

    ರಂಗಕರ್ಮಿ ಕಾಂತೇಶ್ ಕದರಮಂಡಲಗಿ ಪಾಲಿಕೆ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ವೃತ್ತದ ಮಾರ್ಗವಾಗಿ ಜಾಥಾ ಕುವೆಂಪು ರಂಗಮಂದಿರ ತಲುಪಿತು. ಅಲ್ಲಿ ಚಿತ್ರನಟ ದೊಡ್ಡಣ್ಣ ರಂಗ ದಸರಾಕ್ಕೆ ಚಾಲನೆ ನೀಡಿದರು.
    ರಂಗಕಲೆಗೆ ಅದ್ಭುತವಾದ ಶಕ್ತಿಯಿದೆ. ಕಲಿತವರನ್ನು ಕೈ ಬೀಸಿ ಕರೆಯುತ್ತದೆ. ಕಲಿಯದವರನ್ನೂ ತನ್ನತ್ತ ಆಕರ್ಷಿಸುತ್ತದೆ. ನಾಟಕ ಅತಿ ರಮಣೀಯವಾದುದು. ನಾನು ಈ ಹಂತ ತಲುಪಿಸಿರುವುದು ರಂಗಭೂಮಿಯ ಮೂಲಕವೇ ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
    ನಾಟಕಕ್ಕೆ ಸಮ್ಮೋಹನ ಶಕ್ತಿಯಿದೆ. ರಂಗಭೂಮಿ ಪ್ರೀತಿ, ಸಾಮರಸ್ಯ, ಸಮಾನತೆಯನ್ನು ಕಲಿಸುತ್ತದೆ. ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾನಿಲಯವೂ ಕಲಿಸುವುದಿಲ್ಲ. ಎಲ್ಲದಕ್ಕೂ ಸಂಸ್ಕಾರವೇ ತಳಹದಿ. ಹೀಗಾಗಿ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು. ಭದ್ರಾವತಿ ವಿಐಎಸ್‌ಎಲ್‌ಗೆ ಕೆಲವೇ ದಿನಗಳಲ್ಲಿ 100 ವರ್ಷ ತುಂಬಲಿದೆ. ಮೈಸೂರು ಮಹಾರಾಜರ ಕೊಡುಗೆ ಅದು. ನಾನು ಇಲ್ಲಿ ನಾಲ್ಕನೇ ದರ್ಜೆ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ ಎಂಬುದೇ ನನಗೆ ಹೆಮ್ಮೆ. ಮೈಸೂರು ಮಹಾರಾಜರು ಕೇವಲ ದಸರಾವನ್ನು ನೀಡಲಿಲ್ಲ. ಸಣ್ಣಕ್ಕಿ ತಿನ್ನಲು ಅವಕಾಶ ಮಾಡಿಕೊಟ್ಟರು ಎಂದು ಗತಕಾಲವನ್ನು ನೆನಪಿಸಿಕೊಂಡರು.
    ರಂಗಕರ್ಮಿಗಳಾದ ಕಾಂತೇಶ ಕದರಮಂಡಲಗಿ, ಕೊಟ್ಟಪ್ಪ ಜಿ.ಹಿರೇಮಾಗಡಿ, ನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts