ಹೈದರಾಬಾದ್: ಬಾಹುಬಲಿ ಚಿತ್ರದ ಬಲ್ಲಾಳ ದೇವ ಪಾತ್ರದ ಮೂಲಕ ಅಸಂಖ್ಯಾತ ಸಿನಿರಸಿಕರ ಮನಗೆದ್ದಿರುವ ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ, ಮಗುವಾಗಿದ್ದಾಗಿನಿಂದಲೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಹೊಸದಾಗಿ ಲಾಂಚ್ ಆಗಿರುವ ನಟಿ ಸಮಂತಾ ಅಕ್ಕಿನೇನಿ ನಡೆಸಿಕೊಡುವ ಟಾಕ್ಶೋನಲ್ಲಿ ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್ ಜತೆ ಭಾಗವಹಿಸಿದ ರಾಣಾ ತಮ್ಮ ಆರೋಗ್ಯ ಸಮಸ್ಯೆ ಕುರಿತು ಮಾತನಾಡಿ ಕಣ್ಣೀರಿಟ್ಟರು. ರಾಣಾ ಮಾತ್ರವಲ್ಲ ಅವರ ನೋವಿನ ಮಾತುಗಳನ್ನು ಕೇಳಿ ಸಮಂತಾ ಹಾಗೂ ಕಾರ್ಯಕ್ರಮದಲ್ಲಿ ನೆರದಿದ್ದ ವೀಕ್ಷಕರು ಸಹ ಕಂಬನಿ ಹರಿಸಿದರು.
ಬಿಡುಗಡೆಯಾಗಿರುವ ಕಾರ್ಯಕ್ರಮದ ಎರಡನೇ ಎಪಿಸೋಡ್ ಟ್ರೈಲರ್ನಲ್ಲಿ ಭಾವುಕ ಸನ್ನಿವೇಶವೂ ಸೇರಿಕೊಂಡಿದೆ. ಚಿಯರ್ ಮಾಡುತ್ತಲೇ ವೇದಿಕೆ ಪ್ರವೇಶ ನೀಡುವುದರಿಂದ ಟ್ರೈಲರ್ ಆರಂಭವಾಗುತ್ತದೆ. ಬಳಿಕ ಸಂಭಾಷಣೆ ನಡೆಸುವಾಗ ಅದರ ನಡುವೆ ಸಮಂತಾ, ರಾಣಾ ಅವರ ಆರೋಗ್ಯ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾರೆ. ಬಳಿಕ ಆ ಕುರಿತು ಮಾತನಾಡುವ ರಾಣಾ, ಜೀವನ ವೇಗವಾಗಿ ಮುನ್ನುಗುತ್ತಿರುವಾಗ ಕೆಲವೊಮ್ಮೆ ದಿಢೀರ್ ವಿರಾಮದ ಬಟನ್ ಇರುತ್ತದೆ. ಬಿಪಿ ಮತ್ತು ಹೃದಯದ ಸುತ್ತ ಕ್ಯಾಲ್ಸಿಫಿಕೇಶನ್ ಇದೆ. ಕಿಡ್ನಿ ವೈಫಲ್ಯವೂ ಆಗಿಬಿಟ್ಟಿದೆ. ಶೇ. 70 ರಷ್ಟು ಪಾರ್ಶ್ವವಾಯು ಅಥವಾ ರಕ್ತಸ್ರಾವ ಸಂಭವವಿದೆ ಮತ್ತು ಸಾಯುವ ಸಾಧ್ಯತೆ 30 ರಷ್ಟಿದೆ ಎಂದು ಭಾವುಕರಾಗಿ ಕುಸಿದರು.
ಇದನ್ನೂ ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಡಾಕ್ಟರ್ ಬಲಿ? ಐ ಲವ್ ಯೂ ಎಂದು ಬರೆದು ಆತ್ಮಹತ್ಯೆ
ರಾಣಾ ಕತೆ ಕೇಳಿ ಕಂಬನಿ ಮಿಡಿದ ಸಮಂತಾ, ಅವರನ್ನು ಸೂಪರ್ ಹೀರೋ ಎನ್ನತ್ತಾ ಜನರು ನಿಮ್ಮ ಸುತ್ತಲೂ ಮುಳುಗುತ್ತಿದ್ದರೂ, ನೀವು ಬಂಡೆಯಂತೆ ಇದ್ದೀರಿ. ನನ್ನ ಕಣ್ಣ ಮುಂದೆಯೇ ನಾನದನ್ನು ನೋಡಿದ್ದೇನೆ. ಹೀಗಾಗಿಯೇ ನೀವು ನನಗೆ ಸೂಪರ್ ಹೀರೋ ಎಂದು ಹೇಳಿದರು.
ಇನ್ನು ರಾಣಾ ಅವರು ವರ್ಷದ ಆರಂಭದಲ್ಲಿ ಮಿಹೀಕಾ ಬಜಾಜ್ ಎಂಬುವರ ಜತೆ ರಾಣಾ ಸಪ್ತಪದಿ ತುಳಿದರು. ರಾಣಾ ಅವರು ಮೂತ್ರಪಿಂಡ ಕಸಿಗಾಗಿ ಅಮೆರಿಕದಲ್ಲಿದ್ದಾರೆಂಬ ಹಲವಾರು ವದಂತಿಗಳು ಜುಲೈನಲ್ಲಿ ಬಂದವು. ಆದರೆ, ಇದನ್ನು ರಾಣಾ ತಳ್ಳಿಹಾಕಿದ್ದಾರೆ. ಮುಂದಿನ ಹಿರಣ್ಯಕಶ್ಯಪು ಚಿತ್ರಕ್ಕಾಗಿ ಸಂಶೋಧನೆಗೆಂದು ಕೆಲವಾರ ಅಮೆರಿಕದಲ್ಲಿದ್ದೆ ಎಂದು ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುವಾಗ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)