ಶ್ರೀನಿವಾಸಪುರ: ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಪೈಪೋಟಿ ಆರಂಭವಾಗಿದೆ. ಏತನ್ಮಧ್ಯೆ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರನ್ನು ಎಂಎಲ್ಸಿ ಮಾಡುವಂತೆ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರಿಂದ ಆಗ್ರಹ ಕೇಳಿಬಂದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕೆ.ಆರ್.ರಮೇಶ್ಕುಮಾರ್ ಸೋಲಿನ ನಂತರ ಕೆಲವು ದಿನಗಳ ಕಾಲ ಸಾರ್ವಜನಿಕರೊಂದಿಗೆ ಕಾಣಿಸಿಕೊಳ್ಳದೆ ದೂರ ಉಳಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ಆರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ರಮೇಶ್ಕುಮಾರ್ಗೆ ಆಹ್ವಾನ ನೀಡಿದರು. ಆದರೆ ಇದನ್ನು ನಿರಾಕರಿಸಿ ಎಂಎಲ್ಸಿ ನಜೀರ್ ಅಹಮದ್ಗೆ ಆ ಸ್ಥಾನವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿ, ಸದ್ಯಕ್ಕೆ ಯಾವುದೇ ಸ್ಥಾನಮಾನ ಬೇಡ ಎಂದು ಮೌನಕ್ಕೆ ಶರಣಾಗಿದ್ದರು. ಬಳಿಕ ಸರ್ಕಾರದ ಗ್ಯಾರಂಟಿಗಳ ನಿರ್ವಹಣೆ ಜವಾಬ್ದಾರಿಯನ್ನು ನಿಭಾಯಿಸುವಂತೆ ಆಹ್ವಾನವನ್ನೂ ನಿರಾಕರಿಸಿ, ಎಲ್ಲ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು.
ಮೇಲ್ಮನೆಯಲ್ಲಿ ಖಾಲಿಯಾಗಿರುವ ಸದಸ್ಯರ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಮತ್ತು ರಾಜಕೀಯ ಹಿತೈಷಿಗಳ ಒತ್ತಾಯದ ಮೇರೆಗೆ ರಮೇಶ್ಕುಮಾರ್ ಗ್ರೀನ್ಸಿಗ್ನಲ್ ನೀಡಿ, ಗುರುವಾರ ಕ್ಷೇತ್ರದ 200ಕ್ಕೂ ಹೆಚ್ಚು ಕಾರ್ಯಕರ್ತರು ಪರವಾಗಿ ಸಿಎಂ, ಡಿಸಿಎಂ ಹಾದಿಯಾಗಿ ಕೆಲವು ಸಚಿವರ ಮುಂದೆ ಬ್ಯಾಟಿಂಗ್ ಮಾಡಿದ್ದಾರೆ.
ಮೊದಲು ಅವರನ್ನು ಒಪ್ಪಿಸಿ: ರಮೇಶ್ ಕುಮಾರ್ ಅವರಂಥ ಹಿರಿಯ ರಾಜಕಾರಣಿ ಸರ್ಕಾರಕ್ಕೆ ಬೇಕಾಗಿದ್ದು, ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅವರನ್ನು ನೀವು ಒಪ್ಪಿಸಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ. ಮೊದಲು ಅವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಸಿಎಂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.