ವಿಜಯಪುರ: ಜನ್ಮ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳಡಿ 28000 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಜಿಲ್ಲೆಗೆ 8789 ಮನೆಗಳು ಮಂಜೂರಾಗಿವೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಅಧಿವೇಶನ ಹಿನ್ನೆಲೆ ದೆಹಲಿಯಲ್ಲಿರುವ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣಕ್ಕೆ ಮಂಜೂರು ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮನೆ ನಿರ್ಮಾಣ ಯೋಜನೆ ಅಡಿ 20000 ಮನೆ ನಿರ್ಮಿಸುವ ಯೋಜನೆಗೂ ಮಂಜೂರಾತಿ ದೊರೆತಿದೆ. ಇದು ಪ್ರಧಾನಿ ಮೋದಿ ಜಿಲ್ಲೆಯ ಬಡ ಜನರಿಗೆ ಕೊಟ್ಟ ಜನ್ಮ ದಿನದ ಕೊಡುಗೆ ಎಂದು ಅವರು ಬಣ್ಣಿಸಿದ್ದಾರೆ.
ಈ ಎರಡೂ ಯೋಜನೆಗಳಡಿ ನಿರ್ಮಿಸುವ ಮನೆ ನಿರ್ಮಾಣಕ್ಕೆ ಒಟ್ಟು ಕೇಂದ್ರ ಸರ್ಕಾರ ತನ್ನ ಪಾಲಿನ 431.84 ಕೋಟಿ ರೂ.ನೀಡಲಿದ್ದು, ಈ ಪೈಕಿ 40 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ರಾಜ್ಯ ವಸತಿ ಸಚಿವ ಹರದೀಪ ಪುರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಿಸುವ ಯೋಜನೆಗಳ ಅನುಷ್ಠಾನಕ್ಕೆ ಸ್ಪಂದಿಸಬೇಕೆಂದು ಜೂನ್ ತಿಂಗಳಲ್ಲಿ ನಾನು ಬರೆದ ಪತ್ರಕ್ಕೆ ಕೇಂದ್ರ ಸಚಿವರು ಈ ವಿಷಯ ತಿಳಿಸಿದ್ದಾರೆಂದು ಹೇಳಿರುವ ಜಿಗಜಿಣಗಿ, ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.