ಸಿನಿಮಾ

ರಮೇಶ ಜಾರಕಿಹೊಳಿ ದಾಖಲೆಬಿಡುಗಡೆ ಮಾಡಲಿ

ಬೆಳಗಾವಿ: ರಮೇಶ ಜಾರಕಿಹೊಳಿ ಅವರ ಗೋಕಾಕ ಕ್ಷೇತ್ರ ಸೇರಿದಂತೆ ಅವರ ಉಸ್ತುವಾರಿಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಗೊತ್ತಾಗಿ ಅವರು ಹತಾಶರಾಗಿದ್ದಾರೆ, ಅವರಿಗೆ ಹುಚ್ಚು ಹಿಡಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಿಡಿಕಾರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಂಗಳವಾರ ಮಧ್ಯರಾತ್ರಿ 12.30ಕ್ಕೆ ಕರೆ ಮಾಡಿ ತಮಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎನ್ನುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಆರೋಪಕ್ಕೆ ತೀವ್ರ ಸಿಡಿಮಿಡಿಗೊಂಡರು. ರಮೇಶ ಜಾರಕಿಹೊಳಿ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ ಮತ್ತು ಗೋಕಾಕದಲ್ಲಿ ಬಿಜೆಪಿ ಸೋಲುತ್ತದೆ ಎಂದು ಹತಾಶರಾಗಿದ್ದಾರೆ ಎಂದರು.

ಮಾನ ಮರ್ಯಾದೆ ಇದ್ದರೆ ಆರೋಪಕ್ಕೆ ಪೂರಕವಾಗಿ ಅವರು ಫೋನ್ ಕರೆಯ ಸ್ಕ್ರೀನ್ ಶಾಟ್, ಕಾಲ್ ರೆಕಾರ್ಡ್ ರಿಲೀಸ್ ಮಾಡಲಿ. ಯಾವುದೇ ಮೊಬೈಲ್ಗೆ ಕಾಲ್ ಬಂದಿದ್ದರೂ ಅದರ ದಾಖಲೆ ನೀಡಲಿ. ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಯಾಚಿಸಲಿ ಎಂದು ಸವಾಲು ಹಾಕಿದರು.

‘ಚಾಮುಂಡೇಶ್ವರಿ ದೇವಿ ಆಣೆ ಮಾಡಿ ಸಿಡಿ ಪ್ರಕರಣದಲ್ಲಿದ್ದವನು ನಾನಲ್ಲ ಎಂದು ಹೇಳಿ ಕೆಲವು ದಿನಗಳ ನಂತರ ನಾನೇ ಎಂದು ಒಪ್ಪಿಕೊಂಡ ನೀವು ಯಾವ ನೈತಿಕತೆಯಿಂದ ಮಾಧ್ಯಮಗಳ ಮುಂದೆ ಮಾತನಾಡುತ್ತೀರಿ? ಮಾನ ಮರ್ಯಾದೆ ಇದ್ದರೆ ತಕ್ಷಣ ಪೋನ್ ನಂಬರ್ ರಿಲೀಸ್ ಮಾಡಿ, ಇಲ್ಲವೆ ಕ್ಷಮೆ ಕೇಳಿ. ನಾವು ಸಹನೆಯಿಂದ ಆರೋಪ, ಟೀಕೆಗಳಿಗೆ ಇಷ್ಟು ದಿನ ಉತ್ತರ ಕೊಟ್ಟಿರಲಿಲ್ಲ. ನಿಮ್ಮ ಉದ್ಧಟತನ ಇನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

ಮಾತನಾಡಲು ನಮ್ಮ ಬಳಿಯೂ ಡಿಕ್ಷನರಿ ಇದೆ. ನಾವು ಕಲಿತವರು, ಸೂಕ್ಷ್ಮತೆಯಿಂದ ಮಾತನಾಡುತ್ತೇವೆ. ಇನ್ನು ಮುಂದೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ. ಇವರ ಮಂಚದಾಟದಲ್ಲಿ ಕರ್ನಾಟಕ, ಬೆಳಗಾವಿ ಜಿಲ್ಲೆ ಮತ್ತು ಗೋಕಾಕ ಜನತೆಯ ಮರ್ಯಾದೆ ತೆಗೆದಿದ್ದಾರೆ. ಯಾವ ಮರ್ಯಾದೆ ಇಟ್ಟುಕೊಂಡು ಮಾಧ್ಯಮದ ಮುಂದೆ ಬರುತ್ತಾರೆ? ಇವರ ಕಾಮಪುರಾಣ ಎಲ್ಲರೂ ನೋಡಿದ್ದಾರೆ. ಅಂತಹದ್ದರಲ್ಲಿ ಯಾವ ಮುಖ ಇಟ್ಟುಕೊಂಡು ಬರುತ್ತಾರೆ ಎಂದು ಚನ್ನರಾಜ ಪ್ರಶ್ನಿಸಿದರು.

Latest Posts

ಲೈಫ್‌ಸ್ಟೈಲ್