ದಾವಣಗೆರೆ : ಹರಿಹರ ನಗರಕ್ಕೆ ಬೇಕಿರುವುದು ಅಭಿವೃದ್ಧಿಯೋ?, ಅಕ್ರಮವೋ? ನೀವೇ ಯೋಚಿಸಿ ಮತ ಚಲಾಯಿಸಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಹರಿಹರ ತಾಲೂಕಿನ ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿ ಹಾಗೂ ದೀಟೂರು ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗಿಂತ ಅಕ್ರಮ ಮರಳುಗಾರಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಪತ್ನಿ ಅಭ್ಯರ್ಥಿ ಎಂದು ಈಗ ಅಭಿವೃದ್ಧಿ ಜಪ ಮಾಡುತ್ತಿದ್ದು, ಅಂತಹವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಸಚಿವರ ಅಕ್ರಮ ಮರಳುಗಾರಿಕೆ ಬಗ್ಗೆ ಧ್ವನಿ ಎತ್ತಿದ ಶಾಸಕ ಬಿ.ಪಿ. ಹರೀಶ್ ಅವರಿಗೆ ಸಚಿವರ ಹಿಂಬಾಲಕರು ಜೀವ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು? ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರ ಇಚ್ಛಾಶಕ್ತಿಯಿಂದ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಹರಿಹರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನೂತನ ರೈಲ್ವೆ ನಿಲ್ದಾಣ, ಫ್ಲಾಟ್ ಫಾರ್ಮ್ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆದರೆ, ತಾಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆ ಏನು ತಿಳಿಸಲಿ ಎಂದು ಸವಾಲು ಹಾಕಿದರು.
ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೊಂಡು ಜತೆಯಾಗಿ ಹೆಜ್ಜೆ ಇಡುತ್ತಿವೆ. ರಾಜ್ಯದ 28 ಕ್ಷೇತ್ರದಲ್ಲೂ ಎನ್ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆಯಿಂದ ಕೂಗಳತೆ ದೂರದಲ್ಲಿರುವ ಹರಿಹರಕ್ಕೆ ವರ್ಷದಲ್ಲಿ ಎಷ್ಟು ಬಾರಿ ಭೇಟಿ ಕೊಟ್ಟಿದ್ದಾರೆ. ಅವರ ಹಿಂಬಾಲಕರನ್ನು ಬಿಟ್ಟು ಅಕ್ರಮ ಮರಳುಗಾರಿಕೆ ಮಾಡಿರುವುದು ಬಿಟ್ಟರೆ ಅವರ ಕೊಡುಗೆ ಏನು? ಎಂದು ವಾಗ್ದಾಳಿ ನಡೆಸಿದರು.
ಬಾಕ್ಸ್ 2
2ಜಿ ಎಥೆನಾಲ್ ಘಟಕ ಅನುಷ್ಠಾನ
ಹರಿಹರ ತಾಲೂಕಿನ ಹನಗವಾಡಿ ಬಳಿ 60 ಕೆಎಲ್ಪಿಡಿ ಸಾಮರ್ಥ್ಯದ 960 ಕೋಟಿ ರೂ. ವೆಚ್ಚದ 2 ಜಿ ಎಥೆನಾಲ್ ಘಟಕವನ್ನು ಎಂಆರ್ಪಿಎಲ್ ಅವರು ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಸಹ ಕೆ.ಐ.ಎ.ಡಿ.ಬಿ. ವತಿಯಿಂದ ಹಸ್ತಾಂತರ ಮಾಡಲಾಗಿದೆ. ಕೃಷಿ ತ್ಯಾಜ್ಯದಿಂದ 2ಜಿ ಎಥೆನಾಲ್ ಉತ್ಪಾದನೆ ಮಾಡುವುದರಿಂದ ರೈತರಿಗೂ ಅನುಕೂಲವಾಗಲಿದೆ. ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಗಾಯತ್ರಿ ಸಿದ್ದೇಶ್ವರ್ ತಿಳಿಸಿದರು.
—-