ಮುನವಳ್ಳಿ: ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಎಂಎಲ್ಇಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜ್ಞಾನದ ಜತೆಗೆ ಮೌಲ್ಯಗಳಿಗೂ ಆದ್ಯತೆ ನೀಡಿ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಬೆಳೆಸಬೇಕು. ವಿದ್ಯಾರ್ಥಿಗಳು ಪಾಲಕರ ಆಶೋತ್ತರಗಳಿಗೆ ಸ್ಪಂದಿಸಿ ಉತ್ತಮ ಶಿಕ್ಷಣ ಪಡೆದು ಸಾಧಕರಾಗಿ ಹೊರಹೊಮ್ಮಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆ ಚೇರ್ಮನ್ ಉಮೇಶ ಬಾಳಿ, ಗ್ರಾಮೀಣ ಮಕ್ಕಳಿಗೆ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಬೈಲಹೊಂಗಲ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಬಾಲ್ಯದಲ್ಲಿ ಕಲಿತುಕೊಳ್ಳುವ ಸಂಸ್ಕಾರ, ನಡತೆ ಮಕ್ಕಳ ಬದುಕಿಗೆ ಮುನ್ನುಡಿಯಾಗುತ್ತದೆ. ಮಕ್ಕಳು ಪ್ರತಿಭಾವಂತರಾಗಲು ಪಾಲಕರು ಹಾಗೂ ಶಿಕ್ಷಕರು ಪ್ರ್ರೋತ್ಸಾಹಿಸಬೇಕು ಎಂದರು.
ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಧುರೀಣ ಅಶೋಕ ಪೂಜಾರಿ, ನ್ಯಾಯವಾದಿ ಜಮುನಾ ಪಟ್ಟಣ, ನಿವತ್ತ ಉಪನ್ಯಾಸಕ ಡಾ.ವಿ.ಎಸ್.ಕಟ್ಟಿಮಠ, ಆಡಳಿತಾಧಿಕಾರಿ ಎಚ್.ಕೆ.ಯಡೋಳ್ಳಿ, ಮುಖ್ಯಶಿಕ್ಷಕ ಎ.ವಿ.ರೋಣದ, ಶಿಕ್ಷಕರಾದ ಎ.ವಿ.ನರಗುಂದ, ನಿರ್ಮಲಾ ಗದ್ವಾಲ್, ರಾಜಶೇಖರ ಮಲ್ಲಾಪುರಮಠ, ಮಹಾಂತೇಶ ಬಾಣಿ ಇತರರು ಇದ್ದರು.