ತುಮಕೂರು: ಸಚಿವ ವಿ.ಸೋಮಣ್ಣ ಅವರ ಕಾರು ಸಿದ್ದಗಂಗಾ ಮಠ ಪ್ರವೇಶ ಮಾಡಿದಕ್ಕೆ ರಾಮನಗರ ಎಸ್ಪಿ ಪೊಲೀಸರ ಮೇಲೆ ಸಿಟ್ಟಾದ ಘಟನೆ ನಡೆಯಿತು.
ಭದ್ರತೆ ಹಿನ್ನೆಲೆಯಲ್ಲಿ ಮಠದ ಆವರಣಕ್ಕೆ ಯಾವುದೇ ವಾಹನ ಬಿಡದಂತೆ ಪ್ರಧಾನಿಗಳ ಭದ್ರತಾ ವ್ಯವಸ್ಥೆ ಹೊಂದಿರುವ ಅಧಿಕಾರಿಗಳು ಸೂಚಿಸಿದ್ದರು. ಭದ್ರತೆಯ ಉಸ್ತುವಾರಿಯನ್ನು ರಾಮನಗರ ಎಸ್ಪಿ ಅನೂಪ್ಶೆಟ್ಟಿ ಅವರಿಗೆ ವಹಿಸಲಾಗಿತ್ತು. ಪ್ರವೇಶ ದ್ವಾರದಲ್ಲಿದ್ದ ಪಿಎಸ್ಐ, ಸಚಿವ ಸೋಮಣ್ಣ ಅವರ ಕಾರನ್ನು ಮಠದ ಆವರಣಕ್ಕೆ ಬಿಟ್ಟರು. ಸಚಿವ ಸೋಮಣ್ಣ ವೇದಿಕೆ ನಿರ್ಮಾಣ ವೀಕ್ಷಣೆಗೆ ಆಗಮಿಸಿದ್ದರು. ಇದು ತಿಳಿಯುತ್ತಿದ್ದಂತೆ ಪ್ರವೇಶ ದ್ವಾರಕ್ಕೆ ಆಗಮಿಸಿದ ಎಸ್ಪಿ ಅನುಪ್ ಶೆಟ್ಟಿ ಪಿಎಸ್ಐ ಅವರನ್ನು ತರಾಟೆಗೆ ತೆಗೆದುಕೊಂಡರು. ನನ್ನ ಅನುಮತಿ ಇಲ್ಲದೆ ಕಾರನ್ನು ಹೇಗೆ ಒಳಕ್ಕೆ ಬಿಟ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಚಿವ ಸೋಮಣ್ಣ, ಎಸ್ಪಿಜಿ ಸಿಬ್ಬಂದಿಗೆ ಮನವರಿಕೆ ಮಾಡಬಹುದು. ಆದರೆ ನಮ್ಮ ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಆಗುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ಅಲ್ಲಿಂದ ತೆರಳಿದರು.