ರಾಮನಗರ: ವೈ.ಎಸ್.ವಿ. ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಜೆಡಿಎಸ್ನ ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದೆ.
ರಾಮನಗರ ಜಿಲ್ಲೆಯ ಜೆಡಿಎಸ್ನ ಪ್ರಭಾವಿ ನಾಯಕ, 2008ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ದೂಂತೂರು ವಿಶ್ವನಾಥ್ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಜ.9ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಇದೇ ವೇಳೆ ದೂಂತೂರು ವಿಶ್ವನಾಥ್ ಜೊತೆ ಇನ್ನೂ ಕೆಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
‘ನಮ್ಮ ನಡೆ ಕಾಂಗ್ರೆಸ್ ಕಡೆಗೆ. ರಾಜಕಾರಣ ನಿಂತ ನೀರಲ್ಲ. ನಾನು ಯಾವತ್ತಿಗೂ ನಂಬಿದ ತತ್ವ-ಸಿದ್ಧಾಂತ ಬಿಟ್ಟುಕೊಟ್ಟಿಲ್ಲ. ಅಂತೆಯೇ ವಿಶ್ವಾಸ ಮತ್ತು ನಂಬಿಕೆಗೆ ದ್ರೋಹ ಬಗೆದು ಸ್ವಾರ್ಥ ಸಾಧನೆಗೂ ಇಳಿದವನಲ್ಲ. ನನ್ನ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡಿ ನನ್ನನ್ನು ನಂಬಿದ ಮತ್ತು ಬೆಳೆಸಿದ ಮುಖಂಡರು ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದಾಗ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಹೀಗಾಗಿಯೇ ಹೊಸ ವರ್ಷದ ಸಂಕ್ರಾಂತಿಯ ಹೊಸ್ತಿಲಲ್ಲಿ ರಾಜಕೀಯ ಸಂಕ್ರಮಣಕ್ಕೆ ನಾಂದಿ ಹಾಡುವುದು ಸೂಕ್ತವೇ ಸರಿ. 2004ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ, 2008ರಲ್ಲಿ ಮರುವಿಂಗಡಣೆ ಆದ ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದಾಗ ನಾನಾ ರೀತಿ ಷಡ್ಯಂತ್ರಗಳ ನಡುವೆಯೂ ಸಿಕ್ಕ ನಿಮ್ಮ ಬೆಂಬಲ, ಆಸರೆ, ಆಶೀರ್ವಾದವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಪ್ರಕಟಣೆಯಲ್ಲಿ ದೂಂತೂರು ವಿಶ್ವನಾಥ್ ಹೇಳಿದ್ದಾರೆ.
ಮಂಗಳೂರಿಗೆ ಆಗಮಿಸಿದ ಎಂ.ಎಸ್.ಧೋನಿ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು