ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಭೂಮಿ ಪೂಜೆ ನಡೆಸುವ ಸಂಬಂಧ ಇಂದು ಮಧ್ಯಾಹ್ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆ ನಡೆಸಿದೆ.
ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸಲು ಈ ಸಭೆಯಲ್ಲಿ ಟ್ರಸ್ಟ್ ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ. ಆಗಸ್ಟ್ 5ರಂದು ಮಂದಿರ ಭೂಮಿಪೂಜೆ ನಡೆಯುವುದಾಗಿ ಊಹಾಪೋಹಗಳು ಈ ಮೊದಲೇ ಎದ್ದಿದ್ದವು. ಇದೀಗ ಅದೇ ದಿನದಂದು ಪೂಜೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇನ್ನು ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಲು ಟ್ರಸ್ಟ್ ನಿರ್ಧಾರ ಮಾಡಿದೆ. ಅಂತೆಯೇ, ಮೋದಿಯವರೂ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನೋಂದಣಿಯಾಗಲಿ ನಾನು ಯಾರೆಂದು ಗೊತ್ತಾಗುತ್ತೆ: ಟೀಕಾಕಾರರಿಗೆ ಡ್ರೋನ್ ಪ್ರತಾಪ್ ಸವಾಲು
ಒಟ್ಟು 15 ಟ್ರಸ್ಟೀಗಳಲ್ಲಿ 12 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಉಳಿದ ಮೂವರು ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು.
ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿಗಳಲ್ಲಿ ಓರ್ವರಾದ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಇಂದಿನ ಸಭೆಯಲ್ಲಿ ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು. (ಏಜೆನ್ಸೀಸ್)