ಚನ್ನಪಟ್ಟಣ: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಗೋವಾ, ಶ್ರೀಲಂಕಾ ಮಾದರಿಯ ಜೂಜು ಅಡ್ಡೆ (ಕ್ಯಾಸಿನೋ)ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಗರದ ಅಂಚೆ ಕಚೇರಿ ರಸ್ತೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ವೇದಿಕೆ ಅಧ್ಯಕ್ಷ ರಮೇಶ್ಗೌಡ ಮಾತನಾಡಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಹಾಳು ಮಾಡಿ , ರಾಜ್ಯಕ್ಕೆ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಗೋವಾ ಶ್ರೀಲಂಕಾ ಮಾದರಿಯಲ್ಲಿ ಜೂಜು ಕೇಂದ್ರಗಳನ್ನು (ಕ್ಯಾಸಿನೋ) ಪ್ರಾರಂಭಿಸಲು ಹೊರಟಿರುವುದು ಸರಿಯಲ್ಲ. ಜೂಜು ಅಡ್ಡೆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅವಶ್ಯಕತೆಯಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಹಾಗೂ ಸಚಿವರು ಕೂಡಲೇ ನಿಲುವನ್ನು ಕೈಬಿಡಬೇಕು. ಜೂಜು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಒಳಿತಲ್ಲ.ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಬಿಜೆಪಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳಿಗಿಂತ ಭಿನ್ನ ಆಡಳಿತ ನೀಡುತ್ತಾರೆ. ಜನ ಸಾಮಾನ್ಯರನ್ನು ಜೂಜು, ಮದ್ಯ ಮಾರಾಟದಿಂದ ಮುಕ್ತ ಮಾಡುತ್ತಾರೆ, ನಮ್ಮ ಧರ್ಮ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ ಎಂದು ನಂಬಿದ್ದ ಜನರ ನಂಬಿಕೆ ಹುಸಿಯಾಗುತ್ತಿದೆ ಎಂದು ತಿಳಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ಗೌಡ, ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಎಚ್.ಮಂಜುನಾಥ್, ನಗರಸಭಾ ಮಾಜಿ ಸದಸ್ಯರಾದ ಎಸ್.ಉಮಾಶಂಕರ್, ಜೆ.ಸಿ.ಬಿ.ಲೋಕೇಶ್, ಮಹಿಳಾ ಘಟಕದ ರೋಸಿ, ಪದಾಧಿಕಾರಿಗಳಾದ ಟೆಂಪೋರಾಜೇಶ್, ನರಸಿಂಹ ಮತ್ತಿತರರಿದ್ದರು.