ನವದೆಹಲಿ: ರಾಜ್ಯಸಭೆ ಸದಸ್ಯ ಹಾಗೂ ಲೋಕತಾಂತ್ರಿಕ ಜನತಾದಳದ (ಎಲ್ಜೆಡಿ) ಮುಖಂಡ ಎಂ.ಪಿ. ವೀರೇಂದ್ರ ಕುಮಾರ್ (83) ಹೃದಯಾಘಾತಕ್ಕೆ ಒಳಗಾಗಿ ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕೇಂದ್ರದ ವಿತ್ತ ಖಾತೆಯ ಮಾಜಿ ಸಹಾಯಕ ಸಚಿವರಾಗಿದ್ದ ಅವರು ಮಾತೃಭೂಮಿ ಮುದ್ರಣ ಮಾಧ್ಯಮ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಆಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪತ್ನಿ ಉಷಾ, ಪುತ್ರಿಯರಾದ ಆಶಾ, ನಿಶಾ ಮತ್ತು ಜಯಲಕ್ಷ್ಮಿ, ಪುತ್ರ ಮಾಜಿ ಶಾಸಕ ಹಾಗೂ ಎಲ್ಜೆಡಿಯ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ. ಶ್ರೇಯಾಮ್ಸ್ ಕುಮಾರ್ ಇದ್ದಾರೆ.
ಕೇರಳ ಮೂಲದವರು: ಎಂ.ಪಿ. ವೀರೇಂದ್ರ ಕುಮಾರ್ ಅವರು ಸಾಮಾಜವಾದಿ ನಾಯಕ ಎಂ.ಕೆ. ಪದ್ಮಪ್ರಭಾ ಗೌಡರ್ ಮತ್ತು ಮರುದೇವಿ ಅವ್ವ ಅವರ ಪುತ್ರರಾಗಿದ್ದರು. ಕೇರಳದ ವಯನಾಡ್ ಜಿಲ್ಲೆಯ ಕಾಲ್ಪೆಟ್ಟಾದಲ್ಲಿ ಜನಿಸಿದ್ದರು. ಚೆನ್ನೈನ ವಿವೇಕಾನಂದ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಅಮೆರಿಕದ ಓಹಿಯೋದ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದರು.
ಇದನ್ನೂ ಓದಿ: ಹುಟ್ಟುಹಬ್ಬ ದಿನದಂದು ರೆಬೆಲ್ ಸ್ಟಾರ್ ನೆನಪುಗಳು: ಉಳಿದವರು ಕಂಡಂತೆ…
ಆಗಿನ ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಅವರಿಂದ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದ ಇವರು, 1968ರಿಂದ 1970ರ ನಡುವೆ ಸಂಯುಕ್ತ ಸಮಾಜವಾದಿ ಪಕ್ಷದ ರಾಷ್ಟ್ರೀಯ ಖಚಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಇವರು ಜನತಾಪಾರ್ಟಿ ಸೇರಿದ್ದಲ್ಲದೆ, ನಂತರ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೀರೇಂದ್ರ ಕುಮಾರ್ ಜೈಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಇವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. 1987ರಲ್ಲಿ ಶಾಸಕರಾಗಿ ಆಯ್ಕೆಯಾದ ಇವರು ಇ.ಕೆ. ನಯನಾರ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡು ಅರಣ್ಯ ಸಚಿವಾಗಿ ಕೆಲಸ ಮಾಡಿದ್ದರು. ಅರಣ್ಯನಾಶದ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿ, ಆ ಬಗ್ಗೆ ಆದೇಶ ಹೊರಡಿಸಿದ್ದ ಇವರು 48 ಗಂಟೆಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.
1996ರಲ್ಲಿ ಕೋಳಿಕೋಡ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಇವರು ವಿತ್ತ ಖಾತೆಯ ಸಹಾಯಕ ಸಚಿವರಾಗಿದ್ದರು. ಬಳಿಕ ಎಚ್.ಡಿ. ದೇವೇಗೌಡ ಹಾಗೂ ಐ.ಕೆ. ಗುಜ್ರಾಲ್ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರಗಳಲ್ಲಿ ಕಾರ್ಮಿಕ ಖಾತೆಯ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಪುನಃ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ, 2016ರ ನಂತರದಿಂದ ಇವರು ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಕನ್ನಡಿ ಮುಂದೆ ನಿಂತ ಹಾಗೆ