ಚಿತ್ರದುರ್ಗ: ಹೊರವಲಯದ ಭೋವಿ ಗುರುಪೀಠದಲ್ಲಿ ಜು. 18ರಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ, ಪಟ್ಟಾಭಿಷೇಕದ 14ನೇ ವಾರ್ಷಿಕೋತ್ಸವ, ಭೋವಿ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ಮುಖಂಡ ರಾಮಪ್ಪ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಬಾರಿ ಸಮುದಾಯದ ಜನರನ್ನು ಒಗ್ಗೂಡಿಸುವ, ಅಭಿವೃದ್ಧಿ ಕುರಿತು ಚರ್ಚಿಸುವ, ಸಾಂಸ್ಕೃತಿಕ ಹಬ್ಬವಾಗಿ ಮಹೋತ್ಸವ ಆಚರಿಸುತ್ತ ಬರಲಾಗುತ್ತಿದೆ. ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ, ಐಎಎಸ್, ಕೆಎಎಸ್, ಪಿಎಚ್ಡಿ ಸೇರಿ ಉನ್ನತ ವ್ಯಾಸಂಗ ಪಡೆದ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು ಎಂದರು.
ವಧು-ವರರ ಸಮಾವೇಶ, ರಕ್ತದಾನ ಶಿಬಿರ, ಶ್ರೀ ಸಿದ್ಧರಾಮೇಶ್ವರರ ಕುರಿತು ವಿಚಾರ ಸಂಕಿರಣ, ಸಮುದಾಯದ ಜನಪ್ರತಿನಿಧಿಗಳಿಗೆ ಸನ್ಮಾನ ಆಯೋಜಿಸಲಾಗಿದೆ. ಸಚಿವರು, ಶಾಸಕರು ಒಳಗೊಂಡು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಬುಡಕಟ್ಟು ಹಿನ್ನೆಲೆಯ ಈ ಸಮುದಾಯ ವಲಸೆ ವೃತ್ತಿ ಅವಲಂಬಿತ ಜೀವನ ನಡೆಸುತ್ತಾ ಬಂದಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ಸಮಾಜದ ಅಭಿವೃದ್ಧಿ ನಿರೀಕ್ಷಿತ ಮಟ್ಟ ಇನ್ನೂ ತಲುಪಿಲ್ಲ ಎಂದು ಬೇಸರಿಸಿದರು.
ಸಾಂಪ್ರದಾಯಿಕವಾಗಿ ಕೆರೆ-ಕಟ್ಟೆ, ಗುಡಿ-ಗೋಪುರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿರುವ ಈ ಸಮುದಾಯಕ್ಕೆ ಆ ಕೆಲಸಗಳೂ ಈಗ ಸಿಗದಂತಾಗಿದೆ. ಅಭಿವೃದ್ಧಿ ಹೆಸರಲ್ಲಿ ಆಧುನಿಕ ಯಂತ್ರಗಳ ಭರಾಟೆ ಜೋರಾಗಿದ್ದು, ಸಮಾಜದ ಜನ ಅತಂತ್ರರಾಗಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಶ್ರೀಗಳ ನೇತೃತ್ವದಲ್ಲಿ ಸಂಘಟಿಸುವ, ಪ್ರಗತಿಯತ್ತ ಕೊಂಡೊಯ್ಯಲು ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.