ನವದೆಹಲಿ: ರಾಜಸ್ಥಾನ ರಾಜಕೀಯ ನಾಟಕ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದಲ್ಲಿ 25 ಶಾಸಕರು ನವದೆಹಲಿ ತಲುಪಿದ್ದು, ಹೈಕಮಾಂಡ್ ಮುಂದೆ ಬಲಪ್ರದರ್ಶನ ನಡೆಸಲಿರುವುದಾಗಿ ಹೇಳಲಾಗುತ್ತಿದೆ.
ಇದುವರೆಗೂ ಆಪರೇಷನ್ ಕಮಲದ ಮೂಲಕ ಹಣದ ಆಮಿಷ ಒಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸುತ್ತಿದ್ದರು. ಆದರೆ, ಈಗ ಅವರು ಮತ್ತು ಡಿಸಿಎಂ ಸಚಿನ್ ಪೈಲಟ್ ನಡುವೆ ಏನೊಂದು ಸರಿಯಿಲ್ಲ. ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಕಂದಕ ದಿನೇದಿನೆ ಹಿಗ್ಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿರುವ ಸಚಿನ್ ಪೈಲಟ್ ಪಕ್ಷದ ಹೈಕಮಾಂಡ್ ಎದುರು ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರಾದ ಓಂ ಪ್ರಕಾಶ್ ಹುಡ್ಲಾ, ಸುರೇಶ್ ಟಾಂಕ್ ಮತ್ತು ಖುಶ್ವೀರ್ ಸಿಂಗ್ ಕೂಡ ಪೈಲಟ್ ಅವರನ್ನು ಬೆಂಬಲಿಸಿ ನವದೆಹಲಿ ತಲುಪಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಸಾಮಾನ್ಯರ ಓಡಾಟಕ್ಕೆ ನಿರ್ಬಂಧ, ಪ್ರಭಾವಿಗಳ ಸಂಚಾರಕ್ಕೆ ಅನುಬಂಧ
ಇದಕ್ಕೂ ಮುನ್ನ ಈ ಮೂವರು ಶಾಸಕರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಿಸಿಕೊಂಡಿದ್ದರು. ಬೆದರಿಕೆ ತಂತ್ರಗಾರಿಕೆಯ ಮೂಲಕ ಸರ್ಕಾರವನ್ನು ಉರುಳಿಸುವ ಇವರ ಪ್ರಯತ್ನವನ್ನು ವಿಫಲಗೊಳಿಸಲು ಅಧಿಕಾರಿಗಳು ಯತ್ನಿಸಿದ್ದರು ಎನ್ನಲಾಗಿದೆ. ಶಾಸಕರೆಲ್ಲರಿಗೂ ಐಟಿಸಿ ದೆಹಲಿ ಹೋಟೆಲ್ನಲ್ಲಿ 25 ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ವಾಣಿಜ್ಯೋದ್ಯಮಿಯೊಬ್ಬರ ಹೆಸರಿನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಶನಿವಾರ ರಾತ್ರಿ ಸಭೆ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಶನಿವಾರ ತಮ್ಮ ಬೆಂಬಲಿಗರ ಸಭೆಯನ್ನು ಕರೆದಿದ್ದರು. ಅವರ ಸಂಪುಟದ ಸಚಿವರು ಅನೇಕರು ಸಿಎಂ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗೆಹ್ಲೋಟ್ ಬೆಂಬಲಿಗರು ತಮ್ಮ ಬೆಂಗಾವಲು ಪಡೆ ಸಿಬ್ಬಂದಿಯ ಮೂಲಕ ತಮ್ಮ ಪಕ್ಷದ ಶಾಸಕರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.