ರಾಜರಾಜೇಶ್ವರಿನಗರ: ಐದು ವರ್ಷಗಳ ಹಿಂದೆ ನಾನು ಕಳೆದುಕೊಂಡಿದ್ದ ಅರಿಶಿಣ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ. ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಾಗ್ದಾನ ಮಾಡಿದರು.
ಸೋಮವಾರ ಆರ್.ಆರ್. ನಗರದ ವಿವಿಧೆಡೆ ಬೆಳಿಗ್ಗೆ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ ಕುಸಮಾ, ನನ್ನ ಹೆಸರು ಚುನಾವಣಾ ಕಣದಲ್ಲಿ ಮುನ್ನೆಲೆಗೆ ಬಂದ ಕ್ಷಣದಿಂದಲೂ ಬೇರೆ ಪಕ್ಷದವರು ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ನನ್ನ ಗಂಡನ ಹೆಸರು ಬಳಸಬಾರದು ಎನ್ನುತ್ತಾರೆ, ನಾನು ಯಾವ ತಪ್ಪು ಮಾಡಿದ್ದೇನೆ? ಗಂಡ ಸತ್ತ ನಂತರ ಹೆಣ್ಣು ಸ್ವಾಭಿಮಾನದಿಂದ ಬದುಕಬಾರದೆ? ಈ ಸವಾಲಿಗೆ ಉತ್ತರ ನೀಡುವ ಮಹದವಕಾಶ ಮತದಾರರಿಗೆ ಲಭಿಸಿದೆ ಎಂದರು.
ತಂದೆ-ತಾಯಿಗೆ ಹೊರೆಯಾಗದೆ ನನ್ನ ಕಾಲಿನ ಮೇಲೆ ನಾನೇ ನಿಂತುಕೊಂಡು ಜೀವಿಸುತ್ತಿದ್ದೇನೆ. ನನಗಾದ ಆಘಾತದಿಂದ ಹೊರಬರಲು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದು ಇಲ್ಲಿನ ಮಕ್ಕಳಿಗೆ ಪಾಠ ಹೇಳುತ್ತಿದ್ದೇನೆ. ನೀವು ನೀಡುವ ಮತ ನನ್ನ ಪತಿ ಡಿ.ಕೆ. ರವಿ ದಕ್ಷತೆಗೆ ಸಿಗುವ ಗೌರವ, ಮಹಿಳಾಶಕ್ತಿಗೆ ಸಿಗುವ ಮನ್ನಣೆ ಎನ್ನುತ್ತ ಕುಸಮಾ ಮತಯಾಚಿಸಿದರು.
ಜನರ ಕಣ್ಣೀರು ಒರೆಸುವ ಉತ್ತಮ ಜನಸೇವಕಿಯಾಗಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆ. ಇದು ಸಾಕಾರವಾಗಬೇಕಾದರೆ, ಹಿಂದಿನ ಎರಡು ಚುನಾವಣೆಗಳಲ್ಲಿ ನೀಡಿದಂತೆ ಈ ಬಾರಿಯೂ ಕಾಂಗ್ರೆಸ್ಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.
‘ನಿಮ್ಮ ಜತೆಗೆ ನಾವಿದ್ದೇವೆ, ಭಯಪಡಬೇಡಿ’ ಎಂದು ವಿವಿಧ ಮಹಿಳಾ ಸಂಘಟನೆಯ ಕಾರ್ಯಕರ್ತರು ಹೇಳುವ ಮೂಲಕ ಕುಸುಮಾ ಕೈ ಬಲಪಡಿಸಿದರು. ಅರಿಶಿಣ-ಕುಂಕುಮ-ಹೂಮಾಲೆ ನೀಡಿ ಮಡಿಲು ತುಂಬುವ ಮೂಲಕ ಮತದಾರರು ಸ್ವಾಗತಿಸಿದರು.
VIDEO| ಕೈ ಮುಗಿಯುವೆ ನನ್ನ ಸೊಸೆಯನ್ನು ಆಶೀರ್ವದಿಸಿ, ಅವಳ ಕಣ್ಣೀರು ನೋಡಿ ಸಂಕಟ ಆಗ್ತಿದೆ: ಡಿ.ಕೆ.ರವಿ ತಾಯಿ