ಬೆಂಗಳೂರು: ಉದ್ಯಮಿ ಸಾಕಿದ್ದ 11 ಬೆಕ್ಕುಗಳು ಒಂದರ ಹಿಂದೆ ಒಂದಂತೆ ಸಾವನ್ನಪ್ಪಿದ್ದು, ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜರಾಜೇಶ್ವರಿನಗರದ ತಿರುಚ್ಚಿ-ಮಹಾಸ್ವಾಮಿ ರಸ್ತೆಯ ಅಪಾರ್ಟ್ಮೆಂಟ್ ನಿವಾಸಿ ಉದ್ಯಮಿ ಶ್ಯಾಮವೀರ್ ಶರ್ಮಾ (47) ಎಂಬುವರು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನೆಲಮಹಡಿಯ ಪ್ಯಾಸೇಜ್ನಲ್ಲಿ 4 ಬೆಕ್ಕುಗಳು, 7 ಬೆಕ್ಕಿನ ಮರಿಗಳನ್ನು ಸಾಕಲಾಗಿತ್ತು. ಅವುಗಳಿಗೆ ಬಟ್ಟಲಿನಲ್ಲಿ ಆಹಾರ ಇಡಲಾಗುತ್ತಿತ್ತು. 2 ವರ್ಷಗಳ ಹಿಂದೆ 3 ಬೆಕ್ಕುಗಳು ಸಾವನ್ನಪ್ಪಿದ್ದವು. ಯಾವ ಕಾರಣಕ್ಕೆ ಸಾವನ್ನಪ್ಪಿದ್ದವು ಎಂಬುದು ಗೊತ್ತಾಗಲಿಲ್ಲ. ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ.
ವಾರದ ಹಿಂದೆ 11 ಬೆಕ್ಕುಗಳ ಪೈಕಿ 7 ಬೆಕ್ಕುಗಳು ಒಂದರ ಹಿಂದಂತೆ ಸಾವನ್ನಪ್ಪುತ್ತವು. ರಕ್ತಸ್ರಾವ, ವಾಂತಿ, ನಿತ್ರಾಣದಿಂದ ಅಸುನೀಗಿದವು. ಅನುಮಾನ ಬಂದು ಅಪಾರ್ಟ್ಮೆಂಟ್ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಬೆಕ್ಕುಗಳಿಗೆ ಊಟ ಹಾಕುವ ಬಟ್ಟಲುಗಳಿಗೆ ಮಹಿಳೆಯೊಬ್ಬರು ಪುಡಿ ಮಿಶ್ರಣ ಮಾಡುತ್ತಿರುವುದು ದೃಶ್ಯ ಸೆರೆಯಾಗಿದೆ.
ಇದರಿಂದ ಬೆಕ್ಕುಗಳ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ವೈರಸ್ನಿಂದ ಸಹಜ ಸಾವು ಬಂದಿದ್ದೀಯೇ ಅಥವಾ ವಿಷ ಸೇವನೆ ಮಾಡಿ ಸಾವನ್ನಪ್ಪಿದ್ದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಉದ್ಯಮಿ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 428ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಕ್ಕುಗಳ ಕಳೆಬರಹಗಳನ್ನು ಪಶು ವೈದ್ಯರ ಬಳಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ತಜ್ಞರ ವರದಿ ಬಂದ ಮೇಲೆ ನಿಖರ ಕಾರಣ ತಿಳಿದುಬರಬೇಕಿದೆ. ಆ ಅಪರಿಚಿತ ಮಹಿಳೆ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.