ಬೈಲಹೊಂಗಲ: ತಾಲೂಕಿನ ಮರಡಿನಾಗಲಾಪುರ, ಗದ್ದಿಕರವಿನಕೊಪ್ಪ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ, ಜೋರಾಗಿ ಬೀಸಿದ ಗಾಳಿಗೆ ಮನೆಗಳ ಛಾವಣಿಯ ತಗಡುಗಳು ಹಾರಿಹೋಗಿ ಅಪಾರ ಹಾನಿಯಾಗಿದೆ.
ಮರಡಿನಾಗಲಾಪುರ ಗ್ರಾಮದ ಉದ್ದಪ್ಪ ದೇಮಪ್ಪ ವಿಭೂತಿ ಎಂಬುವರ ಮನೆಗೆ ಹಾನಿಯಾಗಿದ್ದು, ಅವರ ಪುತ್ರ ಅದೃಶ್ಯ ಎಂಬಾತನ ಮೇಲೆ ತಗಡು ಬಿದ್ದು ತಲೆಗೆ ಗಾಯವಾಗಿದೆ. ಗ್ರಾಮದಲ್ಲಿ 7 ಮನೆಗಳ ತಗಡು ಹಾರಿ ಹೋಗಿವೆ.
ಗದ್ದಿಕರವಿನಕೊಪ್ಪ ಗ್ರಾಮದಲ್ಲಿ 3 ಮನೆಗಳು ಜಖಂಗೊಂಡಿವೆ. ಮರಗಳು ಧರೆಗುರುಳಿವೆ. ಚಿಕ್ಕಬಾಗೇವಾಡಿ ಗ್ರಾಮದಲ್ಲೂ ಭಾರಿ ಮಳೆಯಾಗಿದ್ದು, ಹೊಲಗದ್ದೆಗಳು ನೀರಿನ ಹೊಂಡದಂತಾಗಿವೆ. ಕಲ್ಲೂರ, ಪಟ್ಟಿಹಾಳ ಕೆ.ಎಸ್. ಗ್ರಾಮಗಳಲ್ಲೂ ಭಾರಿ ಮಳೆಯಾಗಿದೆ ಎಂದು ನೇಸರಗಿ ಕಂದಾಯ ನಿರೀಕ್ಷಕ ರಮೇಶ ಕೋಲಕಾರ ತಿಳಿಸಿದ್ದಾರೆ.