ಸಿರವಾರ: ಅತ್ತನೂರು ಗ್ರಾಮದಲ್ಲಿ ಬಹುಜನ ಸಂಘಷರ್ ಸಮಿತಿ ಮಂಗಳವಾರ ಆಯೋಜಿಸಿದ್ದ 27ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮವನ್ನು ಗ್ರಾಮದ ಗಿರಿಜಮ್ಮ-ಚನ್ನಬಸವ ನಾಯಕ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸಕ ಡಾ.ಬಸವರಾಜ ಸುಂಕೇಶ್ವರ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ಅವರು ದೇಶದ ಪ್ರತಿ ಪ್ರಜೆಗೆ ನ್ಯಾಯ ಸಿಗುವ ರೀತಿಯಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಬಾಬಾ ಸಾಹೇಬರು ಮಹಿಳೆಯರ ಬಗ್ಗೆ ಅತಿ ಹೆಚ್ಚು ಗೌರವ ಮತ್ತು ಪ್ರೀತಿ ಹೊಂದಿದ್ದರು. 1951ರಲ್ಲಿ ಹಿಂದು ಕೋಡ್ ಬಿಲ್ನ್ನು ಸಂಸತ್ತಿನಲ್ಲಿ ಮೂರು ಬಾರಿ ಮಂಡಿಸಿ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು, ವಿವಾಹ ವಿಚ್ಚೇದನಾ ಹಕ್ಕು ಸೇರಿದಂತೆ ಸಮಾನತೆಯಿಂದ ಬದುಕಲು ಹಲವು ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಮಹಿಳಾವಾದಿಯಾಗಿದ್ದಾರೆ ಎಂದು ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹಾಲಿಂಗ ಇಂಗಳದಾಳ, ಬಹುಜನ ಸಂಘಷರ್ ಸಮಿತಿ ಮಹಾ ಪೋಷಕ ಎಂ.ಆರ್.ಭೇರಿ, ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಸದಸ್ಯ ವಿರೂಪಾಕ್ಷಿ ಜಗ್ಲಿ, ಮುಖಂಡರಾದ ತಿಮ್ಮಯ್ಯ ನಾಯಕ, ಅಮರೇಶ ಗುಡಿಸಲಿ, ಡಿ.ಹೆಚ್.ಭೀಮಣ್ಣ ಸಿರವಾರ, ಮಹಾಂತೇಶ ಮ್ಯಾಗಟಿ, ಜೆ.ಭೀಮರಾಯ ಅತ್ತನೂರು, ಬಸವರಾಜ್ ಗಚ್ಚಿನಮನೆ, ಶೇಖರಪ್ಪ ಸೇರಿದಂತೆ ಅನೇಕರು ಇದ್ದರು.