ರಾಯಚೂರು: ಸನಾತನ ಹಿಂದು ಧರ್ಮ ಹಾಗೂ ವೀರಶೈವ ಲಿಂಗಾಯತ ಪರಂಪರೆಗಳ ಸೃಷ್ಟಿ ಆದಿಯಿಂದ ಬಂದಿದ್ದು, ಅನಾದಿ ಕಾಲದಿಂದಲೂ ಹಿಂದು ಧರ್ಮದ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಿವೆ ಎಂದು ಕಾಶಿ ಪೀಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಕಿಲ್ಲೆ ಬೃಹನ್ಮಠದಲ್ಲಿ ಗುರುಪಾದ ಶಿವಯೋಗಿ ಶಿವಾಚಾರ್ಯರ ಜಯಂತಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸದ್ಭಾವನಾ ಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪಂಚ ಪೀಠಗಳು ಮತ್ತು ಶಾಖಾ ಮಠಗಳು ಭಾರತದ ಉದ್ದಗಲಕ್ಕೂ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿವೆ. ಕಿಲ್ಲೆ ಬೃಹನ್ಮಠದಿಂದ ಕೊಳಂಕಿವರೆಗೆ ಪ್ರತಿವರ್ಷ ಸದ್ಭಾವನಾ ಯಾತ್ರೆ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವ ಕೆಲಸ ಮಾಡಲಾಗುತ್ತಿದೆ. ಮಾನವ ಧರ್ಮವನ್ನು ಒಗ್ಗೂಡಿಸುವ ಕೆಲಸವನ್ನು ಸದ್ಭಾವನಾ ಯಾತ್ರೆ ಮೂಲಕ ಶ್ರೀಮಠ ಮಾಡುತ್ತಾ ಬರುತ್ತಿದೆ ಎಂದರು.
ಮಠಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ ಸಿಮೀತವಾಗದೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಅದಕ್ಕೆ ಭಕ್ತರ ಸಹಕಾರ ಅಗತ್ಯ ಎಂದು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ನ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಪ್ರಮುಖರಾದ ಎ.ವಸಂತಕುಮಾರ, ಕೆ.ಶಾಂತಪ್ಪ, ಬಸವರಾಜ ಪಾಟೀಲ್ ದರೂರು, ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ರಾಮನಗೌಡ ಏಗನೂರು, ಕೇಶವರೆಡ್ಡಿ, ಆಂಜನೇಯ ಕಡಗೋಲ ಇದ್ದರು.