ರಾಯಚೂರು: ಸಮಾಜ ಮತ್ತು ಭಕ್ತರನ್ನು ಉದ್ಧಾರ ಮಾಡುವ ನಿಟ್ಟಿನಲ್ಲಿ ಮಠ, ಮಾನ್ಯಗಳು ಕೆಲಸ ಮಾಡುತ್ತಿವೆ. ಮಠಗಳು ಅಭಿವೃದ್ಧಿ ಹೊಂದಿದಂತೆ ಭಕ್ತರ ಏಳಿಗೆಯೂ ಆಗುತ್ತದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಗರದ ಮಂಗಳವಾರಪೇಟೆ ಹಿರೇಮಠದಲ್ಲಿ ಜೀರ್ಣೋದ್ಧಾರಗೊಂಡ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಮಠ, ಮಾನ್ಯಗಳ ಕೊಡುಗೆ ಅಪಾರವಾಗಿದೆ. ದೇಶ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಮಠಗಳ ಪಾತ್ರ ಮಹತ್ವದ್ದಾಗಿವೆ. ಶ್ರೀಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಿಕ್ಕ ವಯಸ್ಸಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಪುರಾತನವಾದ ಮಠದ ಜೀರ್ಣೋದ್ದಾರ ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದರು. ಕಟ್ಟಡದ ಉದ್ಘಾಟನೆ ನಿಮಿತ್ತ ಶ್ರೀಮಠದಲ್ಲಿ ಹೋಮ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.