ರಾಯಚೂರು: ಜಿಲ್ಲಾದ್ಯಂತ ಸೋಮವಾರ ಶಾಲೆಗಳನ್ನು ಪುನಾರಂಭಿಸಲಾಗಿದ್ದು, ಶಾಲೆಗಳಲ್ಲಿ ತಳಿರು, ತೋರಣ ಕಟ್ಟಿ ಸಿಂಗಾರ ಮಾಡುವ ಜತೆಗೆ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಹೂವು ನೀಡಿ ಸ್ವಾಗತ ಕೋರುವ ಮೂಲಕ ಮಕ್ಕಳು ಸಂತಸದಿಂದ ಕಲಿಕೆಯಲ್ಲಿ ತೊಡಗುವಂತೆ ವಾತಾವರಣ ನಿರ್ಮಾಣ ಮಾಡಲಾಗಿತ್ತು.
ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಿಂದ ತರಗತಿಗಳು ಸರಿಯಾಗಿ ನಡೆಯದೆ ಶಾಲೆಗಳಿಂದ ದೂರವಿದ್ದ ಮಕ್ಕಳು ಸಂಭ್ರಮದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಬಹುತೇಕ ಎಲ್ಲ ಶಾಲೆಗಳಲ್ಲಿ ಮಕ್ಕಳು ಖುಷಿಯಿಂದ ಶಾಲೆಗೆ ಆಗಮಿಸುತ್ತಿರುವುದು ಕಂಡುಬಂತು. ಮಕ್ಕಳಿಗೆ ಸಿಹಿ ತಿಂಡಿ ನೀಡಿ ಪ್ರಥಮ ದಿನ ತರಗತಿಗಳ ಬದಲು ಮಕ್ಕಳಲ್ಲಿ ಉತ್ಸಾಹ ತುಂಬುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಕೂಡ ಬಹುದಿನಗಳಿಂದ ಭೇಟಿಯಾಗದ ತಮ್ಮ ಸಹಪಾಠಿಗಳನ್ನು ಕಂಡು ಸಂತಸ ಹಂಚಿಕೊಳ್ಳುತ್ತಿದ್ದರು.
ನಗರದ ಸ್ಟೇಷನ್ ಬಜಾರ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಚಾಲನೆ ನೀಡಿ ಮಾತನಾಡಿ, ಕರೊನಾದಿಂದ ಮಾನಸಿಕ ತೊಂದರೆ ಅನುಭವಿಸಿರುವ ಮಕ್ಕಳಿಗೆ ನಿರಂತರ ಕಲಿಕಾ ಚಟುವಟಿಕೆಗಳ ಮೂಲಕ ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ನಗರಸಭೆ ಸದಸ್ಯರಾದ ಡಿ.ಲಕ್ಷ್ಮೀ, ಈ.ಶಶಿರಾಜ, ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ಮಂಚಾಲ, ಮುಖಂಡರಾದ ಆಂಜನೇಯ ಕಡಗೋಲ, ಹರೀಶ ನಾಡಗೌಡ, ರೋನಾಲ್ಡ್ ಬಿನ್ನಿ, ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ, ಮುಖ್ಯಶಿಕ್ಷಕ ರಾಘವೇಂದ್ರ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ ಇದ್ದರು.