ನವದೆಹಲಿ: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸೂರತ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಬಿಜೆಪಿಯವರ ಪ್ರಶ್ನೆಯನ್ನು ನೀವ್ಯಾಕೆ ಕೇಳುತ್ತೀರಾ ಎಂದು ಹೇಳುವ ಮೂಲಕ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಗಿದ್ಧಾರೆ.
ಸೋಮವಾರ ಗುಜರಾತ್ ಕಾಂಗ್ರೆಸ್ ಕಚೇರಿಗೆ ರಾಹುಲ್ ಆಗಮಿಸಿದ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರು ಜಮಾಯಿಸಿದ್ದರು. ಈ ವೇಳೆ ಮಾಧ್ಯಮದವರೊಬ್ಬರು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನ ಎಂಬ ಬಿಜೆಪಿ ಆರೋಫಕ್ಕೆ ಕೇಳಿದ ಪ್ರಶ್ನೆಗೆ ರಾಹುಲ್ ಪ್ರತಿ ಬಾರಿ ನೀವು ಬಿಜೆಪಿಯವರು ಕೇಳುವ ಪ್ರಶ್ನೆಯನ್ನು ಯಾಕೆ ಕೇಳುತ್ತೀರಿ ಎಂದು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿಂದುಳಿದ ವರ್ಗ ಹಾಗೂ ಮಾಧ್ಯಮದವರನ್ನು ಅವಮಾನಿಸಿರುವ ರಾಹುಲ್ ಗಾಂಧಿ ಅವರ ಮನಸ್ಥಿತಿ ಎಂತಹದ್ದು ಎಂದು ತೋರುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಅವರ ನಡವಳಿಕೆಯನ್ನು ತೋರಿಸಿಕೊಡುತ್ತದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಪ್ರತಿಕ್ರಿಯಿಸಿ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಅರಿವಿಲ್ಲ. ಮೊದಲು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು ಈಗ ಮಾರ್ದಯಮಗಳ ಮೇಲೆ. ಇದು ಪ್ರಜಾಪ್ರಭುತ್ವ ನಿಮ್ಮ ಮನೆಯಲ್ಲ ಎಂದು ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ.