ಮಂಗಳೂರು: ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಮೂರನೇ ರ್ಯಾಗಿಂಗ್ ಪ್ರಕರಣ ವರದಿಯಾಗಿದೆ. ಸುರತ್ಕಲ್ ಬಳಿಯ ಖಾಸಗಿ ಕಾಲೇಜೊಂದರಲ್ಲಿ ಮತ್ತೆ ರ್ಯಾಗಿಂಗ್ ನಡೆದಿದ್ದು, ಇದನ್ನು ಪ್ರಶ್ನಿಸಿದ ಪ್ರಾಂಶುಪಾಲರ ಮೇಲೆಯೇ ಹಲ್ಲೆ ನಡೆದಿದೆ. ಈ ಸಂಬಂಧ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಮಹಮ್ಮದ್ ಬಾಝೀಲ್, ಸಂಬ್ರಮ್ ಆಳ್ವಾ, ಕೆ.ಯು. ಸಮೀಲ್, ಅಶ್ವಿನ್ ಎಸ್.ಜಾನ್ಸನ್ ಬಂಧಿತರು.
ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಪ್ರಾಂಶುಪಾಲರು ನಾಲ್ವರು ವಿದ್ಯಾರ್ಥಿಗಳನ್ನು ಕರೆಸಿ ಬುದ್ದಿ ಮಾತು ಹೇಳಿದ್ದರು. ಕಾಲೇಜಿನಿಂದ ಡಿಬಾರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಸಂದರ್ಭ ಪ್ರಾಂಶುಪಾಲರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಸುರತ್ಕಲ್ ಠಾಣೆಯಲ್ಲಿ ಪ್ರಾಂಶುಪಾಲರ ಮೇಲೆ ಹಲ್ಲೆ ಹಾಗೂ ರ್ಯಾಗಿಂಗ್ ಪ್ರಕರಣ ದಾಖಲಾಗಿದೆ. ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕಾಲೇಜುಗಳಲ್ಲಿ ರ್ಯಾಗಿಂಗ್ ಪ್ರಕರಣ ಹೆಚ್ಚುತ್ತಿರುವುದು ಹೊರ ಜಿಲ್ಲೆ, ರಾಜ್ಯದ ಪಾಲಕರು ಆತಂಕ ಪಡುವಂತಾಗಿದೆ.