- ಚಿತ್ರ: ರಾಧೇ ಶ್ಯಾಮ್
- ನಿರ್ದೇಶನ: ರಾಧಾಕೃಷ್ಣ ಕುಮಾರ್
- ನಿರ್ಮಾಣ: ಯುವಿ ಕ್ರಿಯೇಷನ್ಸ್ ಮತ್ತು ಟಿ-ಸೀರೀಸ್
- ತಾರಾಗಣ: ಪ್ರಭಾಸ್, ಪೂಜಾ ಹೆಗ್ಡೆ, ಕೃಷ್ಣಂರಾಜು, ಭಾಗ್ಯಶ್ರಿ, ಸಚಿನ್ ಖೇಡೇಕರ್, ಜಗಪತಿ ಬಾಬು ಮುಂತಾದವರು
| ಚೇತನ್ ನಾಡಿಗೇರ್
ಅವನು ಖ್ಯಾತ ಜ್ಯೋತಿಷಿ ವಿಕ್ರಮಾದಿತ್ಯ. ಹಸ್ತಸಾಮುದ್ರಿಕೆಯ ಐನ್ಸ್ಟಿನ್, ಭಾರತದ ನಾಸ್ಟಡಾರ್ಮಸ್ ಎಂದೇ ಜನಪ್ರಿಯ. ಹಸ್ತ ನೋಡುತ್ತಿದ್ದಂತೆಯೇ ಆ ಮನುಷ್ಯನ ಭೂತ, ಭವಿಷ್ಯವನ್ನು ಥಟ್ಟನೆ ಹೇಳುತ್ತಿರುತ್ತಾನೆ. ಖುದ್ದು ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಅವರ ಆಡಳಿತದಲ್ಲಿ ಎಮರ್ಜೆನ್ಸಿ ಹೇರಲಾಗುತ್ತದೆ ಎಂದು ಭವಿಷ್ಯ ನುಡಿದಿರುತ್ತಾನೆ. ಬೇರೆಯವರ ಭವಿಷ್ಯದ ಬಗ್ಗೆ ನಿಖರವಾಗಿ ಹೇಳುವ ವಿಕ್ರಮಾದಿತ್ಯನಿಗೆ ತನ್ನ ಭವಿಷ್ಯದ ಬಗ್ಗೆಯೂ ಅಷ್ಟೇ ಸ್ಪಷ್ಟತೆ. ಪ್ರೀತಿರೇಖೆ ಇಲ್ಲ ಎಂದು ಪ್ರೀತಿ, ಮದುವೆಯಿಂದ ದೂರವೇ ಇರುತ್ತಾನೆ. ಹುಡುಗಿಯರೊಂದಿಗೆ ಫ್ಲರ್ಟ್ ಮಾಡಿಕೊಂಡು ಹಾಯಾಗಿರುತ್ತಾನೆ.
ಹೀಗಿರುವಾಗಲೇ, ಪ್ರೇರಣಾ ಎಂಬ ವೈದ್ಯೆ ಸಿಗುತ್ತಾಳೆ. ಮೊದಮೊದಲು ಅವಳ ಜತೆ ಫ್ಲರ್ಟ್ ಮಾಡಿದರೂ ಕ್ರಮೇಣ ಅವಳ ಮೇಲೆ ಪ್ರೀತಿಯಾಗುತ್ತದೆ. ತಾನು ನಂಬಿದ ಭವಿಷ್ಯ ಮತ್ತು ವಿಧಿಯನ್ನು ತಾನೇ ಸುಳ್ಳು ಮಾಡುತ್ತಾನಾ ವಿಕ್ರಮಾದಿತ್ಯ? ‘ರಾಧೇ ಶ್ಯಾಮ್, ಪ್ರೀತಿ ಮತ್ತು ವಿಧಿಯ ನಡುವಿನ ಸಂಘರ್ಷದ ಕಥೆ. ಅದಕ್ಕಿಂತ ಹೆಚ್ಚಾಗಿ, ಯಾವ ಶಾಸ್ತ್ರವೂ ಸಂಪೂರ್ಣವಲ್ಲ, ವಿಧಿಯನ್ನು ಬದಲಾಯಿಸುವುದಕ್ಕೆ ಒಮ್ಮೊಮ್ಮೆ ಅವಕಾಶ ಸಿಗುತ್ತದೆ ಎಂದು ಸಾರುವ ಕಥೆ. ಈ ಕಥೆಯನ್ನು ಅಷ್ಟೇ ಕಲರ್ಫುಲ್ ಆಗಿ ಮತ್ತು ಅದ್ದೂರಿಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಪ್ರತಿ ದೃಶ್ಯವೂ ಒಂದು ಪೇಂಟಿಂಗ್ನಂತಿದೆ. ಬಣ್ಣ, ಕಾಸ್ಟ್ಯೂಮ್ ಮತ್ತು ಪರಿಕರಗಳನ್ನು ಬಹಳ ಅದ್ಭುತವಾಗಿ ಬಳಸಲಾಗಿದೆ. ಸಂಗೀತ ಹಿತವಾಗಿದೆ. ಯೂರೋಪ್ನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೆಟ್ಗಳೂ ಅಷ್ಟೇ ವರ್ಣರಂಜಿತವಾಗಿದೆ.
ಒಟ್ಟಾರೆ ಚಿತ್ರ ನೋಡುತ್ತಿದ್ದಂತೆ ಒಂದು ಹಿತವಾದ ಅನುಭವವಾಗುತ್ತದೆ. ಪ್ರೇಕ್ಷಕರನ್ನು ಹಿಡಿದಿಡುವುದಕ್ಕೆ ಅಷ್ಟೇ ಸಾಕಾ? ಖಂಡಿತಾ ಇಲ್ಲ. ಅದರಲ್ಲೂ ಪ್ರಭಾಸ್ ಒಬ್ಬ ಮಾಸ್ ಹೀರೋ ಆಗಿ ಗುರುತಿಸಿಕೊಂಡವರು. ಅಂಥವರನ್ನು ಇಂಥ ಮೃದುವಾದ ಪಾತ್ರದಲ್ಲಿ, ಕ್ಲಾಸ್ ಚಿತ್ರದಲ್ಲಿ ನೋಡಿ ಅರಗಿಸಿಕೊಳ್ಳುವುದು ಬಹಳ ಕಷ್ಟ. ಅವರಿಗೆ ಇದೊಂದು ವಿಭಿನ್ನ ಪ್ರಯತ್ನವಾದರೂ, ಪ್ರೇಕ್ಷಕರಿಗೆ ಅವರೇ ಮೈನಸ್ ಎಂದೆನಿಸುವ ಸಾಧ್ಯತೆ ಇದೆ. ಮಿಕ್ಕಂತೆ ಚಿತ್ರದಲ್ಲಿ ಅನವಶ್ಯಕವಾಗಿರುವುದು ಏನೂ ಇಲ್ಲದಿದ್ದರೂ, ನಿಧಾನಗತಿಯಲ್ಲಿ ಸಾಗುತ್ತದೆ. ಚಿತ್ರಕ್ಕೆ ಅದೇ ಮೊದಲ ಶತ್ರು ಎಂದರೆ ತಪ್ಪಿಲ್ಲ. ಮೊದಲಾರ್ಧ ಲವಲವಿಕೆಯಿಂದ ಸಾಗಿದರೂ, ದ್ವಿತೀಯಾರ್ಧ ಕೊಂಚ ನಿಧಾನವಾಗುತ್ತದೆ. ಏನೇ ಇದ್ದರೂ, ಕೊನೆಯ 20 ನಿಮಿಷಗಳು ಅವೆಲ್ಲವನ್ನೂ ಮರೆಸಿಬಿಡುತ್ತದೆ. ಪೂಜಾ ತಮ್ಮ ಮುಗ್ಧತೆ ಮತ್ತು ಅಭಿನಯದಿಂದ ಇಷ್ಟವಾಗುತ್ತಾರೆ.
ತಂದೆಯ ಅಂತ್ಯಸಂಸ್ಕಾರಕ್ಕೆಂದು ಬಂದ ಪುತ್ರನೂ ಇನ್ನಿಲ್ಲ; ಇಬ್ಬರ ಸಾವಿನಾಘಾತದ ಮಧ್ಯೆಯೂ ಅಂಗಾಂಗಗಳ ದಾನ..
ಗಂಡ-ಹೆಂಡಿರ ಜಗಳ ಕೊಚ್ಚಿ ಚುಚ್ಚಿಕೊಳ್ಳುವ ತನಕ; ಪತ್ನಿಯ ಸಾವು, ಪತಿ ಪರಿಸ್ಥಿತಿ ಗಂಭೀರ..