ರಬಕವಿ/ಬನಹಟ್ಟಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲೂಕಿನಾದ್ಯಂತ ಶೇಂಗಾ, ಮೆಕ್ಕೆಜೋಳ, ಕಬ್ಬು ಸೇರಿ ಲಕ್ಷಾಂತರ ರೂ. ಮೌಲ್ಯದ ಬೆಳೆ, ಮನೆಗಳು ಹಾಳಾಗಿವೆ. ಮಹಾರಾಷ್ಟ್ರದಲ್ಲಿನ ಜಲಾಶಯಗಳು ತುಂಬಿದ್ದು ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ನದಿ ಮೂಲಕ ರಾಜ್ಯಕ್ಕೆ ಹರಿಬಿಡಲಾಗಿದೆ.
ನದಿ ನೀರಿನ ಮಟ್ಟ ಗಂಟೆ ಗಂಟೆಗೂ ಏರಿಕೆಯಾಗುತ್ತಿದ್ದು ತಾಲೂಕಿನ ಹಿಪ್ಪರಗಿ ಬ್ರಿಜ್ನ ಎಲ್ಲ 10 ಗೇಟ್ಗಳ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ನೀರಿನ ರಭಸದ ಹಿನ್ನೆಲೆಯಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇರುವ ಕಾರಣ ಮೀನಿಗಾಗಿ ಹಾಕಿದ ಬಲೆಯನ್ನು ತೆಗೆಯದೆ ಹಾಗೆಯೇ ಬಿಡಲಾಗುತ್ತಿದೆ ಎಂದು ಹಿಪ್ಪರಗಿ ಮೀನುಗಾರ ಅಕ್ಬರಸಾಬ ಹೊರಟ್ಟಿ ಅಳಲು ತೋಡಿಕೊಂಡಿದ್ದಾರೆ.
ಕೊಯ್ನ ಜಲಾಶಯದಿಂದ ಬುಧವಾರ ಸಂಜೆ 40 ಸಾವಿರ ಕ್ಯೂಸೆಕ್ಗಿಂತ ಅಧಿಕ ನೀರನ್ನು ಕೃಷ್ಣೆಗೆ ಹರಿಬಿಟ್ಟಿದ್ದು, ಬೆಳಗಾವಿ ಜಿಲ್ಲೆಯ ಅನೇಕ ಹಳ್ಳಕೊಳ್ಳಗಳಿಂದ 60 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ನದಿಗೆ ಹರಿದು ಬರುತ್ತಿದೆ. ಆದ್ದರಿಂದ ಹಿಪ್ಪರಗಿ ಬ್ರಿಜ್ನ 10 ಗೇಟ್ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಹಿಪ್ಪರಗಿ ಜಲಾಶಯ ಎಇಇ ಎಸ್.ವಿ. ನಾಯಿಕ ತಿಳಿಸಿದ್ದಾರೆ.