ನವದೆಹಲಿ: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರ ಏರುಗತಿಯಲ್ಲಿಯೇ ಇದೆ. ಇಂಧನ ದರ ಏರಿಕೆಯಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇಂದಲ್ಲ ನಾಳೆ ಇಂಧನ ದರ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಹೇಳಿಕೆ ಬರಸಿಡಿಲು ಬಡಿದಂತಾಗಿದೆ.
ಪೆಟ್ರೋಲ್-ಡೀಸೆಲ್ ದರವನ್ನು ಏಕೆ ಕಡಿತಗೊಳಿಸಲಾಗದು ಎಂಬುದಕ್ಕೆ ಅಮಿತಾಬ್ ಕಾಂತ್ ಸ್ಪಷ್ಟನೆ ನೀಡಿದ್ದಾರೆ. ಅತ್ಯುತ್ತಮ ಗುಣಮಟ್ಟದ ಮೂಲಸೌಕರ್ಯಗಳಿಗೆ ದೊಡ್ಡ ಮೊತ್ತದ ಬಂಡವಾಳ ಹೂಡುವುದರಿಂದ ಅಭಿವೃದ್ಧಿಯು ವೇಗ ಪಡೆದುಕೊಳ್ಳುತ್ತದೆ. ಆದರೆ, ಸಂಪನ್ಮೂಲಗಳು ವಿರಳವಾಗಿದ್ದರೆ ಅದನ್ನು ಮಾಡುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ಸಂಪನ್ಮೂಲ ಸಂಗ್ರಹಕ್ಕೆ ಹಣಕಾಸಿನ ಸಂಗ್ರಹ ತುಂಬಾ ಮುಖ್ಯ ಎಂಬುದು ಅಮಿತಾಬ್ ಕಾಂತ್ ಅಭಿಪ್ರಾಯ.
ಸದ್ಯ ಕೇಂದ್ರ ಸರ್ಕಾರವು ಇಂಧನ ದರ ಏರಿಕೆ ಮತ್ತು ಹಣದುಬ್ಬರದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ವಿರುದ್ಧ ಹೋರಾಡುತ್ತಿದೆ. ಅಗತ್ಯ ವಸ್ತುಗಳ ಮೇಲಿನ ತೆರಿಗೆಯ ರಚನೆಯಲ್ಲಿ ಬದಲಾವಣೆ ತಂದು ಜನರಿಗೆ ಕೊಂಚ ನಿರಾಳ ತಂದುಕೊಡಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಾಂತ್, ಕರೊನಾ ಸಾಂಕ್ರಮಿಕ ನಡುವೆಯೂ ನಮ್ಮ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಎಂದು ಖಚಿತಪಡಿಸಿಕೊಳ್ಳಲು ತೆರಿಗೆ ಸಂಗ್ರಹದ ವೇಗವು ಉಳಿಯಬೇಕಿದೆ ಎಂದರು.
ಈ ಹಿಂದಿನ ಸರ್ಕಾರ ತಂದಿಟ್ಟಿರುವ ಸಂಕಟವಿದು. ದೇಶದ ಅಭಿವೃದ್ಧಿಯ ಪಥಕ್ಕೆ ವೇಗ ನೀಡುವುದಾದರೆ ಮತ್ತು ಭಾರತದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಬಯುಸುವುದಾದರೆ ನಮ್ಮ ಮುಂದೆ ಕೆಲವು ಪ್ರಮುಖ ಸವಾಲುಗಳಿವೆ. ಮೂಲಸೌಕರ್ಯಗಳನ್ನು ಹೇಗೆ ಹೆಚ್ಚಿಸುತ್ತೀರಿ? ಹೆಚ್ಚೆಚ್ಚು ಹಣವನ್ನು ಹೇಗೆ ವ್ಯಯಿಸುತ್ತೀರಿ? ಎಂದು ಕಾಂತ್ ಪ್ರಶ್ನಿಸಿದರು.
ನನ್ನ ಪ್ರಕಾರ, ಭಾರತದ ಆರ್ಥಿಕತೆಯ ಪುನರುಜ್ಜೀವನವು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳಿಗೆ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಕ್ರೋಢಿಕರಿಸುವ ಮೂಲಕವೇ ಆಗುತ್ತದೆ. ನಿಜವಾಗಿಯೂ ನಾವು ಉನ್ನತ ದರ್ಜೆಯ ಮೂಲಸೌಕರ್ಯಗಳ ರಚನೆಯತ್ತ ಗಮನ ಹರಿಸಬೇಕಿದೆ. ಹೀಗೆ ಮಾಡುವುದರಿಂದ ಅದಾಗಿಯೇ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ಆರ್ಥಿಕತೆಯ ಪುನರುಜ್ಜೀವನವೂ ಆಗುತ್ತದೆ ಎಂದರು.
ಹಿಂದಿನ ಸರ್ಕಾರ ಸೃಷ್ಟಿರುವ ಸಂಕಟವನ್ನು ಸರಿಪಡಿಸಲು ಸಂಪನ್ಮೂಲವನ್ನು ಕ್ರೋಢೀಕರಿಸಲೇ ಬೇಕಾಗಿದೆ. ನಿಮ್ಮ ಬಳಿ ಸಂಪನ್ಮೂಲವೇ ಇಲ್ಲದಿದ್ದರೆ, ಮೂಲಸೌಕರ್ಯಕ್ಕೆ ಬಂಡವಾಳ ಹೂಡಲು ಸಾಧ್ಯವೇ ಇಲ್ಲ. ಹೀಗಾಗಿ ಅದನ್ನು ಸರಿಪಡಿಸಲು ಸರಿಯಾದ ಸಮಯದಲ್ಲಿ ಸರ್ಕಾರ ಮಾಡಬೇಕಾದ ಆಯ್ಕೆಯಾಗಿದೆ ಎಂದು ಇಂಧನ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ಕಚ್ಚಾ ತೈಲ ಮತ್ತು ಆಹಾರ ಪದಾರ್ಥಗಳು ಬೆಲೆಯಲ್ಲಿ ಸ್ವಲ್ಪ ಮೃದುತ್ವವನ್ನು ಕಂಡಿದ್ದರಿಂದ ಸಗಟು ಬೆಲೆ ಆಧಾರಿತ ಹಣದುಬ್ಬರವು ಜೂನ್ನಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಆದರೂ, ಹಣದುಬ್ಬರವು ಜೂನ್ನಲ್ಲಿ ಸತತ ಮೂರನೇ ತಿಂಗಳು ದ್ವಿಗುಣದಲ್ಲಿದೆ. ಹೆಚ್ಚುತ್ತಿರುವ ಇಂಧನದ ಬೆಲೆಯು ಕಳವಳಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
800 ದಶಲಕ್ಷ ಜನರಿಗೆ ಆಹಾರ ಪೂರೈಕೆಯನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ ಮತ್ತು ಈ ಅವಧಿಯಲ್ಲಿ, ನರೇಗಾ ಕಾರ್ಯಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮುಂದುವರಿಯುವುದನ್ನು ಸರ್ಕಾರ ಖಚಿತಪಡಿಸಿದೆ ಎಂದು ಕಾಂತ್ ಸಮರ್ಥನೆ ನೀಡಿದರು. (ಏಜೆನ್ಸೀಸ್)
ಜಾಗತಿಕ ವಿವಿ ಹಾದಿಯಲ್ಲಿ ರಾಷ್ಟ್ರೀಯ ವಿದ್ಯಾಲಯ
ಮುಂದೇನು?: ವರ್ಷಾಂತ್ಯಕ್ಕೆ ದೇಶದ 2000 ಚಿತ್ರಮಂದಿರಗಳು ಕ್ಲೋಸ್?
ಒಲಿಂಪಿಕ್ಸ್ ಸಿದ್ಧತೆ ನಡುವೆಯೂ ಸಾನಿಯಾ ಮಿರ್ಜಾ ಭರ್ಜರಿ ಸ್ಟೆಪ್ಸ್