ಶ್ರೀನಗರ: ಈ ವರ್ಷದ ಪಂಚಾಯತ್ ರಾಜ್ ದಿವಸವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಲಾಗುತ್ತಿದ್ದು, ಇದು ದೊಡ್ಡ ಬದಲಾವಣೆಯನ್ನು ಸೂಚಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟವನ್ನು ತಲುಪಿದ್ದು, ಈ ನೆಲದಲ್ಲಿ ನಿಂತು ನಿಮ್ಮೆಲ್ಲರ ಜತೆ ಸಂವಹನ ನಡೆಸುತ್ತಿದ್ದೇನೆ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು ಪಂಚಾಯತ್ ರಾಜ್ ದಿವಸ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ವಿಶೇಷವೆಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಮತ್ತು 35ಎ ಅನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ. ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ ಇಡೀ ರಾಷ್ಟ್ರದ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಇತಿಹಾಸವನ್ನೇ ಬರೆಯಲಾಗುತ್ತಿದೆ. ಅನೇಕ ಖಾಸಗಿ ಹೂಡಿಕೆದಾರರು ಜಮ್ಮು ಮತ್ತು ಕಾಶ್ಮೀರಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ. ಅಭಿವೃದ್ಧಿಯ ಸಂದೇಶದೊಂದಿಗೆ ನಾನಿಲ್ಲಿಗೆ ಬಂದಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ವೇಗ ನೀಡಲು 20 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಇಂದು ಉದ್ಘಾಟಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.
ಸಾಂಬಾ ಜಿಲ್ಲೆಯ ಪಲ್ಲಿಯಲ್ಲಿ 500 ಕಿ.ವ್ಯಾ ಸೌರ ವಿದ್ಯುತ್ ಸ್ಥಾವರದ ಉದ್ಘಾಟನೆಯೊಂದಿಗೆ, ಪಲ್ಲಿ ಪಂಚಾಯಿತಿಯು ದೇಶದ ಮೊದಲ ಶೂನ್ಯ ಇಂಗಾಲದ ಪಂಚಾಯತ್ ಆಗುವತ್ತ ಸಾಗುತ್ತಿದೆ. ಅದು ಪ್ರಜಾಪ್ರಭುತ್ವವಾಗಲಿ ಅಥವಾ ಅಭಿವೃದ್ಧಿಯಾಗಲಿ ಜಮ್ಮು ಮತ್ತು ಕಾಶ್ಮೀರವು ಇಂದು ಹೊಸ ಉದಾಹರಣೆಯನ್ನು ಸ್ಥಾಪಿಸುತ್ತಿದೆ ಎಂದರು.
ಕಳೆದ 2-3 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ರಚಿಸಲಾಗಿದೆ. ನಾನು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಕುರಿತು ಮಾತನಾಡುವಾಗ, ನಮ್ಮ ಗಮನವು ಸಂಪರ್ಕ ಸೇತುವೆಯ ಮೇಲೆ ಕೇಂದ್ರೀಕರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಎಲ್ಲ ರೀತಿಯ ಸಂಪರ್ಕವನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಹಲವು ಯೋಜನೆಗಳನ್ನು ಉದ್ಘಾಟಿಸಿದರು. ‘ಅಮೃತ ಸರೋವರ ಮಿಷನ್’ ಅನ್ನು ಪ್ರಾರಂಭಿಸಿದರು ಮತ್ತು ಸಾಂಬಾದಲ್ಲಿ ವಿಜೇತ ಪಂಚಾಯಿತಿಗಳ ಬ್ಯಾಂಕ್ ಖಾತೆಗಳಿಗೆ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಮೊತ್ತವನ್ನು ವರ್ಗಾಯಿಸಿದರು. 3100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಬನಿಹಾಳ್-ಖಾಜಿಗುಂಡ್ ರಸ್ತೆ ಸುರಂಗವನ್ನು ಉದ್ಘಾಟಿಸಿದರು. ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮೇಲೆ ನಿರ್ಮಾಣ ಮಾಡಲಾಗಿರುವ 850 ಮೆ.ವ್ಯಾ ರ್ಯಾಟ್ಲ್ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ ಮತ್ತು 540 ಮೆ.ವ್ಯಾ ಕ್ವಾರ್ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ ಉದ್ಘಾಟನೆ ಮಾಡಿದರು. (ಏಜೆನ್ಸೀಸ್)
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ದಾಳಿಗೆ ಸಂಚು ರೂಪಿಸಿದ್ದ ಉಗ್ರರು: ಗುಪ್ತಚರ ಮಾಹಿತಿ
ಸಿಂದಿಗೆರೆ ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲಿ: ದೇವರಿಗೆ ಗ್ರಾಮಸ್ಥರ ಹರಕೆ!