ತಿರುವನಂತಪುರಂ: ಒಂದು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವ ವೈದ್ಯೆ ವಿಸ್ಮಯ, ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿರುವ ಘಟನೆ ಕೇರಳದಲ್ಲಿ ಸಾಕಷ್ಟು ಚರ್ಚೆಗೀಡಾಗಿದೆ. ಅದಕ್ಕೆ ಕಾರಣ ಸಾವಿಗೂ ಮುನ್ನ ತಾನು ಅನುಭವಿಸಿದ್ದ ಕಷ್ಟವನ್ನ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿ ವಿಸ್ಮಯ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿರುವ ಗಂಡನ ಹಣದಾಹ ಮತ್ತು ಹಿಂಸೆ ತಾಳಲಾರದೇ ವಿಸ್ಮಯ ಸಾವಿನ ಹಾದಿ ಹಿಡಿದಿದ್ದಾಳೆ.
ಸಾವಿನ ಬಳಿಕ ವಿಸ್ಮಯ ಕುರಿತಾದ ಆಸಕ್ತಿಕರ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಲಯಾಳಂ ನಟ ಕಾಳಿದಾಸ ಜಯರಾಮ್ರಿಗೆ ವಿಸ್ಮಯ ಕಾಲೇಜು ದಿವಸಗಳಲ್ಲಿ ಬರೆದಿದ್ದ ಪ್ರೇಮ ಪತ್ರ ಸಾವಿನ ಬಳಿಕ ವೈರಲ್ ಆಗಿದೆ.
ಎರಡು ವರ್ಷಗಳ ಹಿಂದೆ ಕಾಲೇಜಿನಲ್ಲಿ ಪ್ರೇಮಿಗಳ ದಿನದಂದು ಲವ್ ಲೆಟರ್ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ವಿಸ್ಮಯ, ಕಾಳಿದಾಸ ಜಯರಾಮ್ಗೆ ಪತ್ರ ಬರೆದಿದ್ದಳು ಮತ್ತು ಆನ್ಲೈನ್ನಲ್ಲಿ ತನ್ನ ಸ್ನೇಹಿತೆ ಪತ್ರವನ್ನು ಪೋಸ್ಟ್ ಮಾಡಲು ಬಯಸಿದ್ದಳು. ಅವಳು ಹೇಳಿದಂತೆಯೇ ನಾನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ವಿಸ್ಮಯ ಸ್ನೇಹಿತೆ ಅರುಣಿಮಾ ಹೇಳಿದ್ದಾರೆ. ಆದರೆ, ಆ ಸಮಯದಲ್ಲಿ ಯಾರು ಸಹ ಶೇರ್ ಮಾಡಿರಲಿಲ್ಲ. ಅದನ್ನು ನೋಡಿ ನಾವಿಬ್ಬರು ನಕ್ಕಿದ್ದೆವು ಎಂದು ಅರುಣಿಮಾ ಹೇಳಿಕೊಂಡಿದ್ದಾರೆ.
ಇದೀಗ ಅರುಣಿಮಾ ಪೋಸ್ಟ್ ಕಾಳಿದಾಸರ ಗಮನಕ್ಕೆ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರೀತಿಯ ವಿಸ್ಮಯ ನಿಮ್ಮನ್ನು ಪ್ರೀತಿಸುವ ಜನರಿಂದ ದೂರವಾದ ಬಳಿಕ ನೀವು ನನಗೆ ಬರೆದಿರುವ ಪತ್ರ ಬಂದು ತಲುಪಿದೆ. ಯಾರೂ ಕೇಳದ ಆ ಧ್ವನಿಗಾಗಿ, ಸುಟ್ಟುಹೋದ ಕನಸುಗಳಿಗಾಗಿ ಕ್ಷಮಿಸಿ ಎಂದು ಕಾಳಿದಾಸ ಕೇಳಿಕೊಂಡಿದ್ದಾರೆ.
ವಿಸ್ಮಯ ಅನುಭವಿಸಿದ ಕಿರುಕುಳವನ್ನು ಖಂಡಿಸಿರುವ ಕಾಳಿದಾಸ, ವಿಸ್ಮಯ ಸಾವಿಗೆ ಕಾರಣ ತಿಳಿದು ತೀವ್ರ ದುಃಖವಾಯಿತು. ಸಾಕ್ಷರತೆ ಪ್ರಮಾಣ ಮತ್ತು ಜಗತ್ತಿನ ಮಾಹಿತಿ ಮತ್ತು ಜ್ಞಾನದ ಪ್ರವೇಶದ ಹೊರತಾಗಿಯೂ, ನಮ್ಮ ಜನರು ವರದಕ್ಷಿಣೆ ಕಿರುಕುಳದ ಅಪರಾಧದ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಎಲ್ಲಾ ಗಾಯಗಳು ಯಾವಾಗಲೂ ರಕ್ತಸ್ರಾವವಾಗುವುದಿಲ್ಲ ಎಂದು ವಿಸ್ಮಯ ಘಟನೆಯನ್ನು ಖಂಡಿಸಿದ್ದಾರೆ.
ಘಟನೆ ಹಿನ್ನೆಲೆ
2020ರ ಮೇ ತಿಂಗಳಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿ ಎಸ್.ಕಿರಣ್ಕುಮಾರ್ ಜತೆ ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಕಳೆದ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿರುವ ವಿಸ್ಮಯ ಬಹುಶಃ ಇದೇ ನನ್ನ ಕೊನೇ ಮೆಸೇಜ್ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)
2 ದಿನದ ಅಂತರದಲ್ಲಿ ಮೂವರು ಯುವತಿಯರ ದುರಂತ ಸಾವು: ಸಾಕ್ಷರತಾ ರಾಜ್ಯ ಕೇರಳಕ್ಕೆ ಕಪ್ಪುಚುಕ್ಕೆ
ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ