More

    2 ದಿನದ ಅಂತರದಲ್ಲಿ ಮೂವರು ಯುವತಿಯರ ದುರಂತ ಸಾವು: ಸಾಕ್ಷರತಾ ರಾಜ್ಯ ಕೇರಳಕ್ಕೆ ಕಪ್ಪುಚುಕ್ಕೆ

    ತಿರುವನಂತಪುರಂ: ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳ ಸಾಕ್ಷರತೆ ಮತ್ತು ಲಿಂಗಾನುಪಾತ ಸೇರಿದಂತೆ ಅನೇಕ ವಿಚಾರಗಳಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ವಿದ್ಯಾವಂತರ ರಾಜ್ಯವಾಗಿರುವ ಕೇರಳದಲ್ಲಿ ಕಳೆದ ಎರಡು ದಿನದ ಅಂತರದಲ್ಲಿ ಮೂವರು ಮಹಿಳೆಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿರುವುದು ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ.

    ವಿಸ್ಮಯ ಪ್ರಕರಣ
    ಒಂದು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವ ವೈದ್ಯೆ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ. ಸಾವಿಗೂ ಮುನ್ನ ತಾನು ಅನುಭವಿಸಿದ್ದ ಕಷ್ಟವನ್ನ ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ವೈರಲ್​ ಆಗಿದೆ. 24 ವರ್ಷದ ಎಸ್​.ವಿ ವಿಸ್ಮಯ ಮೃತ ದುರ್ದೈವಿ. 2020ರ ಮೇ ತಿಂಗಳಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿ ಎಸ್​.ಕಿರಣ್​ಕುಮಾರ್​ ಜತೆ ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್​ ಮತ್ತು ಫೇಸ್​ಬುಕ್​ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್​ ಮಾಡಿರುವ ವಿಸ್ಮಯ ಬಹುಶಃ ಇದೇ ನನ್ನ ಕೊನೇ ಮೆಸೇಜ್​ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದಾರೆ.

    ಸುಚಿತ್ರಾ ಪ್ರಕರಣ
    ಸುಚಿತ್ರಾ (19) ಮಂಗಳವಾರ ಆಲಪ್ಪುಳಾದ ವಲ್ಲಿಕುನ್ನಮ್​ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈಕೆ ಕೃಷ್ಣಪುರಂನ ನಿವಾಸಿ. ವಿಷ್ಣು ಎಂಬಾತನ ಜತೆ ವಿವಾಹವಾಗಿತ್ತು. ಮಂಗಳವಾರ ಬೆಳಗ್ಗೆ ಬೆಡ್​ರೂಮ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನೆ ನಡೆಯುವ ವೇಳೆ ಸುಚಿತ್ರಾ ಅತ್ತೆ ಸುಲೋಚನಾ ಮನೆಯಲ್ಲೇ ಇದ್ದರು. ವಿಷ್ಣು ಮತ್ತು ಸುಚಿತ್ರಾ ಇದೇ ವರ್ಷ ಮಾರ್ಚ್​ 21ರಲ್ಲಿ ಸಪ್ತಪದಿ ತುಳಿದಿದ್ದರು. ಮದುವೆಯಾದ ಒಂದು ತಿಂಗಳ ನಂತರ ವಿಷ್ಣು ಕೆಲಸದ ನಿಮಿತ್ತ ಉತ್ತರಾಖಂಡಗೆ ತೆರಳಿದ್ದ. ವರದಕ್ಷಿಣೆ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ.

    ಅರ್ಚನಾ ಪ್ರಕರಣ
    ಕೇರಳದ ವಿಜಿಂಜಮ್​ನ ವೆಂಗನೂರ್​ನಲ್ಲಿರುವ ಗಂಡನ ಮನೆಯಲ್ಲಿ ಅರ್ಚನಾ (24) ಸೋಮವಾರ ರಾತ್ರಿ 11 ಗಂಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ದೇಹದಲ್ಲಿ ಸುಟ್ಟಗಾಯಗಳಾಗಿದ್ದು, ಸಾವಿನ ಬಗ್ಗೆ ಸಾಕಷ್ಟು ಅನುಮಾನು ಮೂಡಿರುವ ಹಿನ್ನೆಲೆಯಲ್ಲಿ ಅರ್ಚನಾ ಗಂಡ ಸುರೇಶ್​ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಗಂಡ-ಹೆಂಡತಿಯ ನಡುವೆ ವರದಕ್ಷಿಣೆ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅರ್ಚನಾ ದೇಹದಲ್ಲಿ ಸುಟ್ಟ ಗಾಯಗಳಿರುವುದರಿಂದ ಇದು ಕೊಲೆ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

    ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ ತುಂಬಾ ಹೊತ್ತು ಬರಲೇ ಇಲ್ಲ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

    ಪತ್ನಿಯ ದುರಂತ ಸಾವು: ಜೀವನ ಸಂಗಾತಿಗೆ ನರಕ ತೋರಿದ ಸಾರಿಗೆ ಅಧಿಕಾರಿಗೆ ಸರ್ಕಾರದ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts