ತಿರುವನಂತಪುರ: ಆರ್ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರದ ಕಹಿ ಅನುಭವವನ್ನು ಬಹುತೇಕರು ಅನುಭವಿಸೇ ಇರುತ್ತಾರೆ. ಅದರಲ್ಲೂ ಆರ್ಟಿಒ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಲಂಚಾವತಾರ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇತ್ತೀಚೆಗೆ ಲಂಚಬಾಕರ ಮೇಲಿನ ದಾಳಿಗಳ ಸಂಖ್ಯೆಯು ಕೂಡ ಅಧಿಕವಾಗಿದ್ದು, ನಿನ್ನೆ ಕೇರಳದ ಆರ್ಟಿಒ ಕಚೇರಿ ಮೇಲೆ ದಾಳಿ ನಡೆದಾಗ ಸ್ಫೋಟಕ ಮಾಹಿತಿಯೊಂದು ಹೊರಬದ್ದಿದೆ.
ತಿರುವನಂತಪುರದ ಆರ್ಟಿಒ ಕಚೇರಿ ಮೇಲೆ ಕೇರಳದ ವಿಜಿಲೆನ್ಸ್ ಅಧಿಕಾರಿಗಳು ಬುಧವಾರ (ಸೆ.7) ದಾಳಿ ನಡೆಸಿದ್ದು, ಕೇರಳದ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಲಂಚದ ಹಣವನ್ನು ಸಂಗ್ರಹಿಸಲು ಏಜೆಂಟ್ಗಳನ್ನು ನೇಮಕ ಮಾಡಿಕೊಂಡಿರುವ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ. ಅಧಿಕಾರಿಗಳು ನಡೆಸಿದ “ಆಪರೇಷನ್ ಜಾಸೂಸ್” ಕಾರ್ಯಾಚರಣೆ ವೇಳೆ ಈ ಸಂಗತಿ ಬಯಲಾಗಿದೆ.
ಆರ್ಟಿಒ ಅಧಿಕಾರಿಗಳು ತಮ್ಮ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ನಂಬಿಕಸ್ಥ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ ಮತ್ತು ಕಚೇರಿಯಲ್ಲಿ ಕೆಲಸ ಮಾಡುವ ಇತರ ಮಧ್ಯವರ್ತಿಗಳಿಂದ ಆ ಏಜೆಂಟ್ ಲಂಚವನ್ನು ಸಂಗ್ರಹಿಸಿ, ಅಧಿಕಾರಿಗಳಿಗೆ ನೀಡುತ್ತಾರೆ. ಕೆಲವು ಅಧಿಕಾರಿಗಳು ವಾರಕ್ಕೊಮ್ಮೆ ಮಾತ್ರ ಹಣ ಪಡೆಯುತ್ತಾರೆ ಎಂದು ತಿಳಿದುಬಂದಿದೆ.
ಮಧ್ಯವರ್ತಿಗಳು ತಮಗೆ ಬೇಕಾದವರ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಿ, ಅರ್ಜಿ ಸಂಖ್ಯೆಯನ್ನು ‘ಕಲೆಕ್ಷನ್ ಏಜೆಂಟ್’ನೊಂದಿಗೆ ಹಂಚಿಕೊಳ್ಳುತ್ತಾರೆ. ಬಳಿಕ ಏಜೆಂಟ್ ಅಪ್ಲಿಕೇಶನ್ ಬಗ್ಗೆ ಆರ್ಟಿಒ ಅಧಿಕಾರಿಗೆ ತಿಳಿಸುತ್ತಾರೆ. ಅರ್ಜಿಗಳ ತ್ವರಿತ ಅನುಮೋದನೆಗಾಗಿ ಲಂಚವನ್ನು ಮರುದಿನ ಏಜೆಂಟ್ ಮೂಲಕ ಹಸ್ತಾಂತರಿಸಲಾಗುತ್ತದೆ.
ಅರ್ಜಿ ವಿಂಗಡಣೆಗೆ ಆದ್ಯತೆ ನೀಡದೇ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮಧ್ಯವರ್ತಿಗಳ ಮೂಲಕ ಬಂದ ಅರ್ಜಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ನೇರವಾಗಿ ಸಲ್ಲಿಕೆಯಾದಂತಹ ಅರ್ಜಿಗಳ ಬಗ್ಗೆ ಸ್ವಲ್ಪವೂ ಗಮನ ಹರಿಸುತ್ತಿಲ್ಲ ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ಹಣದ ಬದಲು RTO ಅಧಿಕಾರಿಗಳು ಸ್ವೀಕರಿಸುತ್ತಿರೋ ಲಂಚದ ಮತ್ತೊಂದು ವಿಧಾನ ತಿಳಿದ್ರೆ ಶಾಕ್ ಆಗ್ತೀರಾ!
ಅಂಚೆಯಣ್ಣನ ವೇತನಕ್ಕೆ ಕನ್ನ: ಗುತ್ತಿಗೆ ನೌಕರರಿಗೆ ಏಜೆನ್ಸಿಗಳ ಕಿರುಕುಳ; ತಿಂಗಳಿಗೆ 5000 ರೂ. ಕಮೀಷನ್..