ಪಟನಾ: ರೈಲಿನ ಕಿಟಕಿಯಿಂದ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕದಿಯಲು ಯತ್ನಿಸಿದ ಖದೀಮನೊಬ್ಬ ಪ್ರಯಾಣಿಕರ ಕೈಗೆ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿಬಿದ್ದು, ನರಕಯಾತನೆ ಅನುಭವಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಸೆ.14ರಂದು ನಡೆದಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಗುಸರೈನಿಂದ ಖಗರಿಯಾ ಕಡೆಗೆ ಹೊರಟ್ಟಿದ್ದ ರೈಲು, ಸಾಹೇಬ್ಪುರದ ಕಮಲ್ ಸ್ಟೇಷನ್ನಲ್ಲಿ ನಿಲ್ಲಿಸಿದ್ದಾಗ, ಖದೀಮನೊಬ್ಬ ಕಿಟಕಿಯಿಂದ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕದಿಯಲು ಯತ್ನಿಸಿದ್ದಾನೆ. ಆದರೆ, ತಕ್ಷಣ ಎಚ್ಚರಗೊಂಡ ಪ್ರಯಾಣಿಕ, ಕಿಟಕಿಯಿಂದ ರೈಲಿನ ಒಳಗೆ ತೂರಿದ್ದ ಖದೀಮ ಕೈಗಳನ್ನು ಹಿಡಿದುಕೊಂಡಿದ್ದಾರೆ. ಸಹ ಪ್ರಯಾಣಿಕರು ಸಹ ಖದೀಮ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು, ರೈಲು ಮುಂದಿನ ನಿಲ್ದಾಣ ಕಡೆ ಚಲಿಸಲು ಶುರು ಮಾಡಿದೆ. ಆಗ ಖದೀಮ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದ್ದಾನೆ.
ನಿಮ್ಮ ದಮ್ಮಯ್ಯ ಅಂತೀನಿ ನನ್ನನ್ನು ಬಿಟ್ಟುಬಿಡಿ ಎಂದು ಖದೀಮ ಗೋಗರೆದಿದ್ದಾನೆ. ಆದರೆ, ಅಷ್ಟಕ್ಕೆ ಬಿಡದ ಪ್ರಯಾಣಿಕರು ಆತನನ್ನು ಗಟ್ಟಿಯಾಗಿ ಹಿಡಿದೆಳೆದುಕೊಂಡೆ ಸುಮಾರು 10 ಕಿ.ಮೀ ಸಾಗಿದ್ದಾರೆ. ಕಿಟಕಿಯಿಂದಾಚೆಗೆ ನೇತಾಡುತ್ತಿದ್ದ ಖದೀಮ ದಾರಿಯುದ್ದಕ್ಕೂ ನೋವಿನಿಂದ ನರಳಿದ್ದಾನೆ. ಅಲ್ಲದೆ, ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾನೆ. ಕೊನೆಗೆ ಖಗರಿಯಾ ಸಮೀಪ ಬರುತ್ತಿದ್ದಂತೆ ರೈಲಿನ ವೇಗ ಕಡಿಮೆಯಾದಾಗ ಆತನ ಕೈಗಳನ್ನು ಪ್ರಯಾಣಿಕರು ಸ್ವತಂತ್ರಗೊಳಿಸಿದರು. ಬಂಧಮುಕ್ತವಾದ ಕೂಡಲೇ ಖದೀಮ ಎದ್ನೋ ಬಿದ್ನೋ ಅಂತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆಯ ಬಗ್ಗೆ ಪೊಲೀಸರು ಯಾವುದಾದ್ರೂ ಕ್ರಮ ತೆಗೆದುಕೊಂಡಿದ್ದಾರಾ ಎಂಬುದರ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇನ್ನು ಬಿಹಾರದ ರೈಲು ನಿಲ್ದಾಣಗಳಲ್ಲಿ ಪಿಕ್ಪಾಕೆಟ್ ಸಾಮಾನ್ಯವಾಗಿದೆ. ಅದರಲ್ಲೂ ಖದೀಮರು ಮೊಬೈಲ್ ಫೋನ್ಗಳನ್ನೇ ಹೆಚ್ಚಾಗಿ ದೋಚುವುದು ನಿತ್ಯವು ನಡೆಯುತ್ತಿದೆಯಂತೆ.
ಇದೇ ರೀತಿಯ ಘಟನೆ ಕಳೆದ ಜೂನ್ನಲ್ಲಿ ಬಿಹಾರದ ಕತಿಹಾರ್ ರೈಲು ನಿಲ್ದಾಣದಲ್ಲಿ ನಡೆಯಿತು. ನಾವಾಡದಲ್ಲಿ ಕಾನ್ಸ್ಟೇಬಲರ್ ಆಗಿ ಸೇವೆ ಸಲ್ಲಿಸುತ್ತಿರುವ ಆರತಿ ಕುಮಾರಿ ಎಂಬುವರು ರೈಲಿನ ಬಾಗಿಲ ಸಮೀಪ, ಮೊಬೈಲ್ ಫೋನ್ ಹಿಡಿದು ನಿಂತಿದ್ದರು. ನಿಲ್ದಾಣ ಹತ್ತಿರಬರುತ್ತಿದ್ದಂತೆ ರೈಲಿನ ವೇಗ ಕಡಿಮೆಯಾದಾಗ ಖದೀಮನೊಬ್ಬ ಆರತಿಯವರ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದ. ಈ ವೇಳೆ ಆರತಿ ಮೊಬೈಲ್ ಅನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಖದೀಮ ಜೋರಾಗಿ ಎಳೆದಾಗ ರೈಲಿನಿಂದ ಹೊರಬಿದ್ದು ಆರತಿ ಅವರಿಗೆ ಗಂಭೀರ ಗಾಯಗಳಾಗಿತ್ತು. (ಏಜೆನ್ಸೀಸ್)
ರಸ್ತೆ ದಾಟುವಾಗಲೇ 130 ಕಿ.ಮೀ ವೇಗದಲ್ಲಿ ಬಂದ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ದುರ್ಮರಣ
ನಿತ್ಯವು ತಪ್ಪದೇ 9 ಗಂಟೆಗೆ ಸರಿಯಾಗಿ ಶಾಲೆಗೆ ಹಾಜರ್! ಈ ಕೋತಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ
ಒಂದೇ ದಿನಕ್ಕೆ ಶ್ರೀಮಂತನಾಗಲು ಹೋಗಿ ಪೊಲೀಸರ ಕೈಗೆ ತಗ್ಲಾಕೊಂಡ ಗುಮಾಸ್ತ! ಈತನ ದುಷ್ಕೃತ್ಯಕ್ಕೆ ಪತ್ನಿಯೂ ಸಾಥ್