ತುಮಕೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 8ನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆಯು ಮಂಡ್ಯ ಬಳಿಕ ಕಲ್ಪತರು ನಾಡು ತುಮಕೂರಿನಲ್ಲಿ ನಡೆಯುತ್ತಿದ್ದು, ಇಂದು ಬೆಳಗ್ಗೆ 6.30 ರಿಂದ ಪುನಾರಂಭವಾಗಿದೆ.
ತುಮಕೂರಿನಲ್ಲಿ ಎರಡನೇ ದಿನದ ಯಾತ್ರೆ ಕೆಬಿ ಕ್ರಾಸ್ನಿಂದ ಆರಂಭವಾಗಿದೆ. ಇಂದು ತಿಪಟೂರು ತಾಲೂಕಿನಲ್ಲಿರುವ ಕೆಬಿ ಕ್ರಾಸ್ನಿಂದ ಬರಕನಾಳು ಗೇಟ್ವರೆಗೆ ಯಾತ್ರೆ ಸಾಗಲಿದೆ. ಯಾತ್ರೆಯು ಜೆಸಿ ಪುರ, ಕಾಡೇನಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿ ಮೂಲಕ ಅಂಕನಬಾವಿಯವರೆಗೆ ಸಾಗಲಿದೆ. ಯಾತ್ರೆಯು ಬೆಳಗ್ಗೆ 13.5 ಕಿ.ಮೀ.ವರೆಗೆ ನಡೆಯಲಿದೆ. ಮಧ್ಯಾಹ್ನ ಕಾಡೇನಹಳ್ಳಿಯಲ್ಲಿ ರಾಹುಲ್ ಗಾಂಧಿ ಅವರು ತೆಂಗು ಬೆಳೆಗಾರರ ಜೊತೆ ಸಂವಾದ ನಡೆಸಲಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಭೋಜನ ವಿರಾಮ ಇರಲಿದೆ. ಮಧ್ಯಾಹ್ನ ಭೋಜನ ವಿರಾಮದ ಬಳಿಕ ಪಾದಯಾತ್ರೆ ಮತ್ತೆ ಆರಂಭವಾಗಲಿದೆ. ಸಂಜೆ ಹತ್ತು ಕಿ.ಮೀ. ಪಾದಯಾತ್ರೆ ನಡೆಯಲಿದೆ.
ಕೆ.ಬಿ.ಕ್ರಾಸ್ನಿಂದ ಆರಂಭವಾಗಿರುವ ಯಾತ್ರೆಯಲ್ಲಿ ರಾಹುಲ್ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕೆ.ಸಿ.ವೇಣುಗೋಪಾಲ್ ಹಾಗೂ ಬಿ.ಕೆ.ಹರಿಪ್ರಸಾದ್ ಭಾಗಿಯಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ದೊಡ್ಡಬಳ್ಳಾಪುರ, ಚಿಂತಾಮಣಿ, ಮಧುಗಿರಿ, ಮುಳಬಾಗಿಲು, ಕೋಲಾರ, ಮಾಲೂರು, ಶಿವಾಜಿನಗರ, ತುರುವೇಕೆರೆ, ತುಮಕೂರು ಸಿಟಿ, ಗ್ರಾಮೀಣ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು, ನಾಯಕರು ಇಂದಿನ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು 10 ಕ್ಷೇತ್ರದ ಕಾರ್ಯಕರ್ತರು ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. (ದಿಗ್ವಿಜಯ ನ್ಯೂಸ್)
ಡಿ.23ರಿಂದ ವೀರಶೈವ ಮಹಾಸಭಾ ಅಧಿವೇಶನ: ಒಬಿಸಿ ಪಟ್ಟಿಗೆ ಸೇರಿಸಲು ಮನವಿ ಸಲ್ಲಿಕೆಗೆ ನಿರ್ಣಯ