ತುಮಕೂರು: ಸಾವಿನಲ್ಲಿ ಒಂದಾದ ತುಮಕೂರು ಮೂಲದ ಪ್ರೇಮಿಗಳಿಬ್ಬರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ನೋವಿನಿಂದ ಹೊರಬರಲಾಗದೇ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು. ಇದೀಗ ಆಕೆಯ ಅಂತ್ಯಕ್ರಿಯೆಯನ್ನು ಪ್ರಿಯಕರನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಹಾಗೂ ಅದೇ ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಸುಷ್ಮಾ(22) ಮೃತ ಪ್ರೇಮಿಗಳು. ಧನುಷ್ ಅವರ ಜಮೀನಿನಲ್ಲೇ ಸುಷ್ಮಾಳ ಅಂತ್ಯಸಂಸ್ಕಾರವಾಗಿದೆ. ಯುವತಿ ಸ್ವಗ್ರಾಮ ಅರೆಹಳ್ಳಿಯಲ್ಲಿ ಸಮಾಧಿ ಮಾಡದೇ ಯುವಕನ ಊರಿನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಪ್ರೇಮಿಗಳ ಪ್ರೀತಿಯನ್ನು ಜೀವಂತವಾಗಿರಿಸಿದ್ದಾರೆ.
ನಡೆದಿದ್ದೇನು?
ಮೇ 11ರಂದು ಧನುಷ್ ಅಪಘಾತದಲ್ಲಿ ಮೃತಪಟ್ಟರೆ ನಿನ್ನೆ (ಮೇ.14) ರಾತ್ರಿ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೆಲಮಂಗಲದ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಧನುಷ್ ಮೃತಪಟ್ಟಿದ್ದರು. ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ಸುಷ್ಮಾ, ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು. ಅಂದಿನಿಂದ ಧುನುಷ್ ಸಾವಿನ ಯೋಚನೆಯಲ್ಲಿಯೇ ಮುಳುಗಿದ್ದಳು.
ಧನುಷ್ ಸಾವಿನ ನೋವಿನಿಂದ ಹೊರಬರಲಾಗದೇ ನಿನ್ನೆ ಸುಷ್ಮಾ ವಿಷ ಸೇವಿಸಿದ್ದಳು. ನಾಲ್ಕೈದು ಆಸ್ಪತ್ರೆಗಳಲ್ಲಿ ಸುತ್ತಾಡಿದರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಸುಷ್ಮಾ ಮೃತಪಟ್ಟಿದ್ದಾಳೆ. ಸುಷ್ಮಾ, ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು. ಧನುಷ್, ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದ. ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇಬ್ಬರು ಪ್ರೀತಿಯನ್ನು ಮನೆಯವರು ಒಪ್ಪಿದ್ದರು. ಮದುವೆ ಕೂಡ ನಿಶ್ಚಯವಾಗಿತ್ತು. ಇದೀಗ ಇಬ್ಬರ ಬಾಳಲ್ಲಿ ಜವರಾಯ ಅಟ್ಟಹಾಸ ಮೆರಿದ್ದಾನೆ. ಇಬ್ಬರ ನಿಜವಾದ ಪ್ರೀತಿಗೆ ಮಣಿದ ಕುಟುಂಬ ಇಬ್ಬರನ್ನು ಒಟ್ಟಿಗೆ ಸಮಾಧಿ ಮಾಡುವ ಮೂಲಕ ಸಾವಿನ ನಂತರವೂ ಒಟ್ಟಿಗೆ ಇರಿಸಿದ್ದಾರೆ. ಇಬ್ಬರ ಸಾವು ಎರಡೂ ಊರಿನಲ್ಲೂ ಕಂಬನಿ ಮಿಡಿಯುವಂತೆ ಮಾಡಿದ್ದು, ಕುಟುಂಬಗಳು ಶೋಕ ಸಾಗರದಲ್ಲಿ ಮುಳುಗಿವೆ. (ದಿಗ್ವಿಜಯ ನ್ಯೂಸ್)
ಮದುವೆ ಖುಷಿಯಲ್ಲಿದ್ದ ತುಮಕೂರು ಪ್ರೇಮಿಗಳ ಬಾಳಲ್ಲಿ ಜವರಾಯನ ಅಟ್ಟಹಾಸ: ಅಲ್ಲಿ ಅಪಘಾತ, ಇಲ್ಲಿ ಆತ್ಮಹತ್ಯೆ!
VIDEO: ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್ ಟವರ್ ಏರಿದವಳ ರಕ್ಷಿಸಿತು ಜೇನ್ನೊಣ! ಇದೆಂಥ ಅಚ್ಚರಿ ಅಂತೀರಾ?
ಪಾರ್ಕ್ ನಲ್ಲಿ ನಗ್ನವಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ ಸೆರೆ: ಹಿಡಿಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ