ಕೊಚ್ಚಿ: ಕೇರಳದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲುವಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸುಧೀರ್ರನ್ನು ಠಾಣಾಧಿಕಾರಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ದೂರು ನೀಡಲು ಬಂದ ಯುವತಿಯ ಮಾತನ್ನು ಆಲಿಸದೇ ಆಕೆಯನ್ನು ಅವಮಾನಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಸುಧೀರ್ ಅವರು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲೇನಲ್ಲ. ಅನೇಕ ಬಾರಿ ದೂರು ನೀಡಲು ಬಂದವರ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೊಲ್ಲಂನ ಅಂಚಲ್ ಮತ್ತು ಕಡಕ್ಕಲ್ ಪೊಲೀಸ್ ಠಾಣೆಯಲ್ಲಿದ್ದ ವೇಳೆ ಅನುಚಿತವಾಗಿ ವರ್ತನೆ ಸೇರಿದಂತೆ ಅನೇಕ ಆರೋಪಗಳು ಸುಧೀರ್ ವಿರುದ್ಧ ಕೇಳಿಬಂದಿದೆ.
ಇನ್ನು ಕೇರಳ ರಾಜ್ಯವನ್ನೇ ಆತಂಕಕ್ಕೆ ದೂಡಿದ್ದ ಉತ್ತರಾ ಕೊಲೆ ಪ್ರಕರಣದಲ್ಲೂ ಸುಧೀರ್ ಹೆಸರು ಕೇಳಿಬಂದಿತ್ತು. ಪ್ರಕರಣ ಸಂಬಂಧ ಸುಧೀರ್ ನೀಡಿದ್ದ ವರದಿಯಲ್ಲಿ ಗಂಭೀರ ಲೋಪಗಳಿರುವುದು ಕಂಡುಬಂದಿತ್ತು. ಅಲ್ಲದೆ, ಸಾಕ್ಷ್ಯ ಸಂಗ್ರಹದಲ್ಲೂ ಲೋಪ ಎಸಗಿದ್ದರು. ಕೊಲೆ ನಡೆದ ನಡೆದ ಮಹತ್ವದ ಸಾಕ್ಷ್ಯಗಳ ಸಂಗ್ರಹವನ್ನು ಸುಧೀರ್ ಮಾಡಿಲೇ ಇಲ್ಲ. ಆ ಬಳಿಕ ಇದೇ ಪ್ರಕರಣದಲ್ಲಿ ಅಪರಾಧ ದಳ ತನಿಖೆ ನಡೆಸಿದಾಗ ಸುಧೀರ್ ಅಸಡ್ಡೆ ತೋರಿದ ಸಾಕ್ಷಿಗಳೇ ಪ್ರಕರಣಕ್ಕೆ ಪ್ರಮುಖ ತಿರುವು ನೀಡಿದವು. ಅಲ್ಲದೆ, ಉತ್ತರಾ ಸಾವಿಗೆ ನ್ಯಾಯವೂ ಸಿಕ್ಕಿತು.
ಒಮ್ಮೆ ಕೊಲ್ಲಂನಲ್ಲಿ ವಲಸೆ ಕಾರ್ಮಿಕರು ದೂರು ನೀಡಲು ಠಾಣೆಗೆ ಬಂದಾಗ ಅವರನ್ನು ಸುಧೀರ್ ಅಗೌರವದಿಂದ ನಡೆಸಿಕೊಂಡಿದ್ದರು. ವಲಸೆ ಕಾರ್ಮಿಕರಿಂದ ಠಾಣೆಯನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ವಿಕೃತಿಯನ್ನು ಮೆರೆದಿದ್ದರು. ಆಗಲೂ ಸುಧೀರ್ ಅವರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಬುದ್ಧಿಯನ್ನು ಮಾತ್ರ ಸುಧೀರ್ ಬಿಟ್ಟಿರಲಿಲ್ಲ.
ಮೊನ್ನೆ (ನ.22) ಮೌಫಿಯಾ ಪರ್ವೀನ್ (23) ಎಂಬ ಎಲ್ಎಲ್ಬಿ ವಿದ್ಯಾರ್ಥಿನಿ ತನ್ನ ಗಂಡನ ಕಿರುಕುಳ ಸಹಿಸದೇ ಆತನ ವಿರುದ್ಧ ದೂರು ನೀಡಲು ಬಂದಾಗಲೂ ಇದೇ ಸುಧೀರ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ದೂರು ನೀಡಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಗಂಡನ ಕುಟುಂಬದ ಜತೆ ಸಂಧಾನಕ್ಕಾಗಿ ನನ್ನನ್ನು ಕರೆಸಿದರು ಎಂದು ಮೌಫಿಯಾ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಗಂಡನ ಕಪಾಳಕ್ಕೆ ಬಾರಿಸಿದ್ದಳು. ಅದನ್ನು ನೋಡಿ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಸುಧೀರ್ ಆಕೆಯನ್ನು ಅವಮಾನಿಸಿದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ನ್ಯಾಯಾ ಸಿಗಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಎಲ್ಎಲ್ಬಿ ಓದುತ್ತಿದ್ದಳು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಾಸ್ಸೆರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ಪೊಲೀಸ್ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!
ಹಾಡುತ್ತಲೇ ಅಸಭ್ಯ ವರ್ತನೆ ತೋರಿದ ರಾಕ್ ಗಾಯಕಿ: ಆಕ್ರೋಶ ವ್ಯಕ್ತವಾಗುತ್ತಲೇ ಕೋರಿದಳು ಕ್ಷಮೆ…
ಮಂಡ್ಯ ಸಂಸದೆ ಸುಮಲತಾಗೆ ಶ್ರೀಸಾಮಾನ್ಯನ ತರಾಟೆ; ಉಸ್ತುವಾರಿ ಸಚಿವ, ಶಾಸಕನನ್ನೂ ಬಿಡಲಿಲ್ಲ ಈ ಪ್ರಜೆ!