More

    LLB ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್​: ಠಾಣಾಧಿಕಾರಿಯ ಕರಾಳ ಮುಖ ಮತ್ತೊಮ್ಮೆ ಬಯಲು..!

    ಕೊಚ್ಚಿ: ಕೇರಳದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲುವಾ ಪೊಲೀಸ್​ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ಸುಧೀರ್​ರನ್ನು ಠಾಣಾಧಿಕಾರಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ದೂರು ನೀಡಲು ಬಂದ ಯುವತಿಯ ಮಾತನ್ನು ಆಲಿಸದೇ ಆಕೆಯನ್ನು ಅವಮಾನಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

    ಸುಧೀರ್​ ಅವರು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲೇನಲ್ಲ. ಅನೇಕ ಬಾರಿ ದೂರು ನೀಡಲು ಬಂದವರ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೊಲ್ಲಂನ ಅಂಚಲ್​ ಮತ್ತು ಕಡಕ್ಕಲ್​ ಪೊಲೀಸ್​ ಠಾಣೆಯಲ್ಲಿದ್ದ ವೇಳೆ ಅನುಚಿತವಾಗಿ ವರ್ತನೆ ಸೇರಿದಂತೆ ಅನೇಕ ಆರೋಪಗಳು ಸುಧೀರ್​ ವಿರುದ್ಧ ಕೇಳಿಬಂದಿದೆ.

    ಇನ್ನು ಕೇರಳ ರಾಜ್ಯವನ್ನೇ ಆತಂಕಕ್ಕೆ ದೂಡಿದ್ದ ಉತ್ತರಾ ಕೊಲೆ ಪ್ರಕರಣದಲ್ಲೂ ಸುಧೀರ್​ ಹೆಸರು ಕೇಳಿಬಂದಿತ್ತು. ಪ್ರಕರಣ ಸಂಬಂಧ ಸುಧೀರ್​ ನೀಡಿದ್ದ ವರದಿಯಲ್ಲಿ ಗಂಭೀರ ಲೋಪಗಳಿರುವುದು ಕಂಡುಬಂದಿತ್ತು. ಅಲ್ಲದೆ, ಸಾಕ್ಷ್ಯ ಸಂಗ್ರಹದಲ್ಲೂ ಲೋಪ ಎಸಗಿದ್ದರು. ಕೊಲೆ ನಡೆದ ನಡೆದ ಮಹತ್ವದ ಸಾಕ್ಷ್ಯಗಳ ಸಂಗ್ರಹವನ್ನು ಸುಧೀರ್​ ಮಾಡಿಲೇ ಇಲ್ಲ. ಆ ಬಳಿಕ ಇದೇ ಪ್ರಕರಣದಲ್ಲಿ ಅಪರಾಧ ದಳ ತನಿಖೆ ನಡೆಸಿದಾಗ ಸುಧೀರ್​ ಅಸಡ್ಡೆ ತೋರಿದ ಸಾಕ್ಷಿಗಳೇ ಪ್ರಕರಣಕ್ಕೆ ಪ್ರಮುಖ ತಿರುವು ನೀಡಿದವು. ಅಲ್ಲದೆ, ಉತ್ತರಾ ಸಾವಿಗೆ ನ್ಯಾಯವೂ ಸಿಕ್ಕಿತು.

    ಒಮ್ಮೆ ಕೊಲ್ಲಂನಲ್ಲಿ ವಲಸೆ ಕಾರ್ಮಿಕರು ದೂರು ನೀಡಲು ಠಾಣೆಗೆ ಬಂದಾಗ ಅವರನ್ನು ಸುಧೀರ್​ ಅಗೌರವದಿಂದ ನಡೆಸಿಕೊಂಡಿದ್ದರು. ವಲಸೆ ಕಾರ್ಮಿಕರಿಂದ ಠಾಣೆಯನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ವಿಕೃತಿಯನ್ನು ಮೆರೆದಿದ್ದರು. ಆಗಲೂ ಸುಧೀರ್​ ಅವರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಬುದ್ಧಿಯನ್ನು ಮಾತ್ರ ಸುಧೀರ್​ ಬಿಟ್ಟಿರಲಿಲ್ಲ.

    ಮೊನ್ನೆ (ನ.22) ಮೌಫಿಯಾ ಪರ್ವೀನ್​ (23) ಎಂಬ ಎಲ್​ಎಲ್​ಬಿ ವಿದ್ಯಾರ್ಥಿನಿ ತನ್ನ ಗಂಡನ ಕಿರುಕುಳ ಸಹಿಸದೇ ಆತನ ವಿರುದ್ಧ ದೂರು ನೀಡಲು ಬಂದಾಗಲೂ ಇದೇ ಸುಧೀರ್​ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ದೂರು ನೀಡಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಗಂಡನ ಕುಟುಂಬದ ಜತೆ ಸಂಧಾನಕ್ಕಾಗಿ ನನ್ನನ್ನು ಕರೆಸಿದರು ಎಂದು ಮೌಫಿಯಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

    ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಗಂಡನ ಕಪಾಳಕ್ಕೆ ಬಾರಿಸಿದ್ದಳು. ಅದನ್ನು ನೋಡಿ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಸುಧೀರ್​ ಆಕೆಯನ್ನು ಅವಮಾನಿಸಿದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ನ್ಯಾಯಾ ಸಿಗಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

    ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಎಲ್​ಎಲ್​ಬಿ ಓದುತ್ತಿದ್ದಳು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಾಸ್ಸೆರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಪೊಲೀಸ್​ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!

    ಹಾಡುತ್ತಲೇ ಅಸಭ್ಯ ವರ್ತನೆ ತೋರಿದ ರಾಕ್‌ ಗಾಯಕಿ: ಆಕ್ರೋಶ ವ್ಯಕ್ತವಾಗುತ್ತಲೇ ಕೋರಿದಳು ಕ್ಷಮೆ…

    ಮಂಡ್ಯ ಸಂಸದೆ ಸುಮಲತಾಗೆ ಶ್ರೀಸಾಮಾನ್ಯನ ತರಾಟೆ; ಉಸ್ತುವಾರಿ ಸಚಿವ, ಶಾಸಕನನ್ನೂ ಬಿಡಲಿಲ್ಲ ಈ ಪ್ರಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts