ಉಡುಪಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪೂರ್ವಿಕರು ದಶಕಗಳ ಹಿಂದೆ ಉಡುಪಿಯಲ್ಲಿ ವಾಸಿಸುತ್ತಿದ್ದರು ಎಂಬ ವದಂತಿ ದಶಕಗಳ ಹಿಂದೆ ಕರಾವಳಿಯಲ್ಲಿ ಹಬ್ಬಿತ್ತು. ಇದೀಗ ಅದೇ ಸುದ್ದಿ ಹೊಸ ರೂಪದಲ್ಲಿ ಮತ್ತೆ ಬೆಳಕಿಗೆ ಬಂದಿದೆ.
ನಾಗಾರಾಧನೆ ಸಂಬಂಧದೊಂದಿಗೆ ಹಳೇ ಸುದ್ದಿಗೆ ಮರುಜೀವ ಸಿಕ್ಕಿದೆ. ಸಚಿನ್ ಪೂರ್ವಿಕರು ಕರಾವಳಿಯಲ್ಲಿ ವಾಸಿಸಿ, ಕಾಲಾನಂತರದಲ್ಲಿ ಮಹಾರಾಷ್ಟ್ರದ ಕಡೆಗೆ ವಲಸೆ ಹೋದರು ಅಂತಾ ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಸಚಿನ್ ತೆಂಡೂಲ್ಕರ್ ಸಂಬಂಧಿಕರು ಅಂತಾ ಅತ್ರಾಡಿಯ ಅಪ್ಪು ಪ್ರಭು ಎಂಬುವರು ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಈ ರೀತಿ ಸುದ್ದಿ ಹಬ್ಬಿ ಪ್ರಭು ಮನೆಯಲ್ಲಿ ಆ ಸುದ್ದಿ ಅಂತ್ಯಗೊಂಡಿತ್ತು.
ಇದೀಗ ಅದೇ ಸುದ್ದಿಗೆ ಮತ್ತೆ ಜೀವ ಬಂದಿದೆ. ಅಪ್ಪು ಪ್ರಭು ಹೇಳುವಂತೆ ಅವರ ತಂದೆ ವಿಠಲ ಪ್ರಭು ಅವರಿಗೆ ಐದು ಸಹೋದರರಂತೆ. ಅದರಲ್ಲಿ ಲಕ್ಷ್ಮಣ ಪ್ರಭು ದೊಡ್ಡವರು. ನಂತರ ರಾಮ ಮತ್ತು ಕೃಷ್ಣ ಎಂಬ ಇಬ್ಬರು ಅವಳಿ ಸಹೋದರರು ಇದ್ದರಂತೆ. ಈ ಪೈಕಿ ಯಾರೋ ಒಬ್ಬರು ಮಹಾರಾಷ್ಟ್ರ ಕಡೆಗೆ ವಲಸೆ ಹೋದರಂತೆ. ವಲಸೆ ಹೋದವರ ಮೊಮ್ಮಗನೇ ಕ್ರಿಕೆಟ್ ದಂತಕತೆ ಸಚಿನ್ ಅನ್ನೋದು ಅಪ್ಪು ಪ್ರಭುಗಳ ಬಲವಾದ ನಂಬಿಕೆಯಾಗಿದೆ.
ಸಚಿನ್ ಹೆಸರು ಹೇಳಿ ಲಾಭ ಮಾಡಿಕೊಳ್ಳುವ ಉದ್ದೇಶ ಅಪ್ಪು ಪ್ರಭುಗೆ ಇಲ್ಲವಂತೆ. ಅವರಾಗಿಯೇ ಯಾರ ಬಳಿಯು ತಾನೂ ತೆಂಡೂಲ್ಕರ್ ಸಂಬಂಧಿ ಎಂದು ಹೇಳಿಕೊಂಡಿಲ್ಲ. ಹಳೇ ವದಂತಿಯ ಬಗ್ಗೆ ಯಾರೋ ಬಂದು ಇವರ ಬಳಿ ವಿಚಾರಿಸಿದಾಗ ಪ್ರಭು ಅವರು ಇಷ್ಟೆಲ್ಲ ಸಂಗತಿಗಳನ್ನು ವಿವರಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಸಚಿನ್, ಪತ್ನಿ ಜತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಾಗಲೂ ಕೂಡ ಜನ ಇದನ್ನೇ ಮಾತನಾಡಿಕೊಳ್ಳುತ್ತಿದ್ದರಂತೆ. ಇದೀಗ ಚರ್ಚೆ ಜೋರಾಗಿ ನಡೆಯುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)
ಬೆಂಗಳೂರಿನಲ್ಲಿ RRR ಚಿತ್ರದ ಪ್ರಿ ರಿಲೀಸ್ ಇವೆಂಟ್: ಇವರೆ ನೋಡಿ ಕಾರ್ಯಕ್ರಮದ ಮುಖ್ಯ ಅತಿಥಿಗಳು
ಅಕ್ಕನನ್ನೇ ಕೊಲೆ ಮಾಡಿದ ತಂಗಿ: ಎಸ್ಕೇಪ್ ಆಗಿದ್ದವಳ ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು