ಕೊಲಂಬೋ: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಜನರು ದಂಗೆ ಎದ್ದಿದ್ದು, ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಲಂಕಾ ರಾಜಕಾರಣದಲ್ಲೂ ಬಿರುಗಾಳಿ ಎಬ್ಬಿದ್ದು, ಲಂಕಾ ಪೊದುಜನ್ ಪೆರುಮನ (ಎಸ್ಎಲ್ಪಿಪಿ) ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ಸಂಸತ್ತಿನಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದೆ. 41 ಸಂಸದರು ಮೈತ್ರಿಯಿಂದ ಹೊರ ನಡೆದು ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಂಡಿದ್ದಾರೆ.
ಲಂಕಾ ಸಂಸತ್ತಿನ ಸದಸ್ಯ ಅನುರಾ ಪ್ರಿಯದರ್ಶನ ಯಪಾ ಮಾತನಾಡಿ, 11 ಸಂಸದರೊಂದಿಗೆ ತಮ್ಮನ್ನು ಪ್ರತ್ಯೇಕ ಸ್ವತಂತ್ರ ಗುಂಪಾಗಿ ಪ್ರತಿನಿಧಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಮಾಜಿ ಸಚಿವ ವಿಮಲ್ ವೀರವಾಂಸ ಕೂಡ 16 ಸಂಸದರ ಜತೆ ಪ್ರತ್ಯೇಕ ಸ್ವತಂತ್ರ ಗುಂಪಾಗಿ ಪ್ರತಿನಿಧಿಸಲು ನಿರ್ಧರಿಸಿರುವುದಾಗಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು 15 ಎಸ್ಎಲ್ಎಫ್ಪಿ ಸಂಸದರೊಂದಿಗೆ ತಮ್ಮನ್ನು ಪ್ರತ್ಯೇಕ ಸ್ವತಂತ್ರ ಗುಂಪಾಗಿ ಪ್ರತಿನಿಧಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಲಂಕಾ ಸರ್ಕಾರದ ಮೈತ್ರಿ ಮುರಿದುಬಿದ್ದಿದ್ದು, ಮೆಜಾರಿಟಿಯನ್ನು ಕಳೆದುಕೊಂಡಿದೆ.
ಸಂಸತ್ತಿನ ಉಪ ಸ್ಪೀಕರ್ ರಂಜಿತ್ ಸಿಯಂಬಲಪಿಟಿಯ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಕೊಲಂಬೊ ಗೆಜೆಟ್ ವರದಿ ಮಾಡಿದೆ. ಅವರು ತಮ್ಮ ರಾಜೀನಾಮೆ ಕುರಿತು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರಿಗೆ ತಿಳಿಸಿದ್ದಾರೆ.
ಗೋತಬಯ ರಾಜೀನಾಮೆಗೆ ಆಗ್ರಹ: ತುರ್ತು ಪರಿಸ್ಥಿತಿ ಹಾಗೂ ಕರ್ಫ್ಯೂ ಹೇರಿದ್ದರೂ ಕೋಪೋದ್ರಿಕ್ತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸಾರ್ವಜನಿಕರ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಬಲವಾಗಿ ಖಂಡಿಸಿರುವ ಪ್ರತಿಪಕ್ಷ ಸಂಸದ ಹರ್ಷ ಡಿ ಸಿಲ್ವ, ‘ನಾವು ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ’ ಎಂದು ಹೇಳಿದ್ದಾರೆ.
ದೇಶವು ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ವಾರಗಳಿಂದ ಆಹಾರ ಮತ್ತು ಅಗತ್ಯ ವಸ್ತುಗಳು, ಇಂಧನ ಮತ್ತು ಅನಿಲದ ನಿರ್ಣಾಯಕ ಕೊರತೆಯಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. 13 ಗಂಟೆಗಳವರೆಗೆ ವಿದ್ಯುತ್ ಕಡಿತದಿಂದ ಜನರು ಹೆಣಗಾಡುತ್ತಿದ್ದಾರೆ. ಪೆಟ್ರೋಲ್ ಲಭ್ಯವಾಗುತ್ತಿಲ್ಲ. ಮೆಡಿಶಿನ್ ಪಡೆಯುವುದು ಕಷ್ಟಕರವಾಗಿದೆ. ಗ್ಯಾಸ್ ಸೌಲಭ್ಯವು ಸಿಗುತ್ತಿಲ್ಲ.
ಬೃಹತ್ ಸಾಲದ ಬಾಧ್ಯತೆಗಳು ಮತ್ತು ಕ್ಷೀಣಿಸುತ್ತಿರುವ ವಿದೇಶಿ ಮೀಸಲುಗಳೊಂದಿಗೆ ಶ್ರೀಲಂಕಾವು ತನ್ನ ಆಮದುಗಳಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಇಂಧನ ಸೇರಿದಂತೆ ಹಲವಾರು ಸರಕುಗಳ ಕೊರತೆಗೆ ಇದು ಕಾರಣವಾಗಿದೆ. ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕವು ಶ್ರೀಲಂಕಾದ ಆರ್ಥಿಕತೆಗೆ ಭಾರೀ ಹೊಡೆತವನ್ನು ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು 14 ಬಿಲಿಯನ್ ಡಾಲರ್ ನಷ್ಟವನ್ನು ಅಂದಾಜಿಸಿದೆ.
ಇನ್ನು ಲಂಕಾದಲ್ಲಿ ಉದ್ಧವಿಸಿರುವ ಆರ್ಥಿಕ ಬಿಕ್ಕಟ್ಟನ್ನು ವಿರೋಧಿಸಿ ಶ್ರೀಲಂಕಾದ ಜನರು ಬೀದಿಗಿಳಿದಿದ್ದು, ಪ್ರತಿಭಟನೆ ಮುಂದುವರಿದಿದೆ. (ಏಜೆನ್ಸೀಸ್)
ಗೋತಬಯ ಸಂಪುಟ ವಿಸರ್ಜನೆ; ದ್ವೀಪರಾಷ್ಟ್ರ ಬಿಕ್ಕಟ್ಟು ಶಮನಕ್ಕೆ ಸಂಯುಕ್ತ ಕ್ಯಾಬಿನೆಟ್ ಸೂತ್ರ
ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿಂತಾರೆ: ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀ
ಸಿಎಂ ಅಧಿಕೃತ ನಿವಾಸದ ಭದ್ರತಾ ಸಿಬ್ಬಂದಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣು