ಬೆಂಗಳೂರು: ಒಂದೆಡೆ ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ನಮ್ಮ ನೆಲದ, ನಮ್ಮ ಸೊಗಡಿನ ಕನ್ನಡ ಸಿನಿಮಾಗಳು ಪೈಪೋಟಿ ನೀಡಬೇಕಾದ ಸ್ಥಿತಿ ಇಂದು ಎದುರಾಗಿದೆ. ಕನ್ನಡಕ್ಕೆ ಡಬ್ ಆದರೂ ಕೂಡ ಬೇರೆ ಭಾಷೆಗಳಲ್ಲಿ ಹೆಚ್ಚು ಚಿತ್ರಮಂದಿರಗಳನ್ನು ನೀಡುತ್ತಿರುವುದು ದುರ್ದೈವದ ಸಂಗತಿಯೇ ಸರಿ. ಸಾಲು ಸಾಲು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕನ್ನಡ ಪ್ರೇಕ್ಷಕರೇ ಅವುಗಳನ್ನು ಕೈಹಿಡಿದು ನಡೆಸಬೇಕೆಂದು ಅನೇಕ ಕಲಾವಿದರು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಇದೀಗ ರಚಿತಾ ರಾಮ್ ಕೂಡ ಸೇರಿಕೊಂಡಿದ್ದಾರೆ. ಅಲ್ಲದೆ, ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣರಿಗೂ ರಚ್ಚು ಟಾಂಗ್ ನೀಡಿದ್ದಾರೆ.
ಹೌದು, ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡತಿಯಾದರೂ, ಅವರು ಹೋಗುತ್ತಿರುವ ದಾರಿ ಹಾಗೂ ಅವರ ನಡೆ, ನುಡಿಯನ್ನು ನೋಡಿದರೆ, ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರ ಬಹುನಿರೀಕ್ಷಿತ “ಪುಷ್ಪಾ” ಚಿತ್ರ ಇಂದು ಕನ್ನಡ, ತೆಲುಗು, ತಮಿಳು, ಹಿಂದೆ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೆಲುಗಿನಲ್ಲಿ ಡಬ್ ಮಾಡಿರುವ ರಶ್ಮಿಕಾಗೆ ಕನ್ನಡ ಡಬ್ ಮಾಡಲು ಸಮಯ ಸಿಗಲಿಲ್ಲವಂತೆ. ಅಲ್ಲದೆ, ತೆಲುಗು, ಹಿಂದಿ ಹೆಚ್ಚೆಚ್ಚು ಬಳಸಿ ಕನ್ನಡವೇ ಬರುತ್ತಿಲ್ಲವಂತೆ. ಇದನ್ನು ಸ್ವತಃ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ, ತಾಯ್ನಾಡಿನಿಂದಲೂ ಬಹುತೇಕ ಅಂತರ ಕಾಯ್ದುಕೊಂಡಿದ್ದಾರೆ. ರಾಜಮೌಳಿಯವರ “ಆರ್ಆರ್ಆರ್” ಚಿತ್ರದಲ್ಲಿ ಜೂ. ಎನ್ಟಿಆರ್ ಹಾಗೂ ರಾಮ್ಚರಣ್ ಕನ್ನಡದಲ್ಲಿ ಡಬ್ ಮಾಡಿರುವಾಗ ಕನ್ನಡತಿಯೇ ಆಗಿರುವ ರಶ್ಮಿಕಾ ಕೈಯಲ್ಲಿ ಯಾಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದರೂ ಅದಕ್ಕೆ ಉತ್ತರ ನೀಡಬೇಕಾಗಿರುವುದು ರಶ್ಮಿಕಾ ಮಾತ್ರ. ಆದರೆ, ಅವರು ಕೊಟ್ಟಿರುವ ಉತ್ತರ ಯಾರಿಗೂ ತೃಪ್ತಿದಾಯಕವಾಗಿಲ್ಲ.
ಇನ್ನು ಪುಷ್ಪ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿದ್ದರೂ ಕೂಡ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಗಿಂತ ತೆಲುಗು ಅವತರಣಿಕೆಯೇ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದರ ನಡುವೆ ಇಂದು ಪುಷ್ಟ ಚಿತ್ರದ ಎದುರು ಕನ್ನಡದ ಆದಿತಿ ಪ್ರಭುದೇವ್ ನಟನೆಯ “ಆನ” ಚಿತ್ರ ಬಿಡುಗಡೆಯಾಗಿದೆ. ಅಲ್ಲದೆ, ಮುಂದಿನ ವಾರದಲ್ಲಿ ಬಡವ ರಾಸ್ಕಲ್ ಹಾಗೂ ರೈಡರ್ ಸಿನಿಮಾ ಬಿಡುಗಡೆಯಾಗಲಿದೆ ಮತ್ತು ಡಿ.31ರಂದು ಲವ್ ಯೂ ರಚ್ಚು ಸಿನಿಮಾ ಬಿಡುಗಡೆಯಾಗಲಿದೆ. ಅಲ್ಲದೆ, ಸಾಕಷ್ಟು ಕನ್ನಡ ಸಿನಿಮಾಗಳು ಬಿಡುಗಡೆಯ ತವಕದಲ್ಲಿವೆ. ಆದರೆ, ಈ ಎಲ್ಲ ಚಿತ್ರಕ್ಕೆ ಶುರುವಾಗಿರುವ ಭೀತಿಯೆಂದರೆ ಪರಭಾಷಾ ಚಿತ್ರಗಳ ಹಾವಳಿ. ಹೀಗಾ “ಲವ್ ಯೂ ರಚ್ಚು” ಸಿನಿಮಾದ ಟ್ರೈಲರ್ ಬಿಡುಗಡೆಯ ವೇಳೆ ಮಾತನಾಡಿದ ರಚಿತಾ ರಾಮ್, ಪುಷ್ಪ ಚಿತ್ರಕ್ಕೆ ಮಾತ್ರವಲ್ಲದೇ, ನಟಿ ರಶ್ಮಿಕಾರಿಗೂ ಟಾಂಗ್ ನೀಡಿದ್ದು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಹಾಗಾದರೆ, ರಚಿತಾ ಹೇಳಿದ್ದೇನು ಎಂದು ನೋಡುವುದಾದರೆ, ನಮ್ಮ ಲವ್ ಯು ಸಿನಿಮಾ ಡಿ.31ರಂದು ಬಿಡುಗಡೆಯಾಗುತ್ತಿದೆ. ತುಂಬಾ ಹೆಮ್ಮೆಯಿಂದ ಹೇಳುತ್ತಿದ್ದೇನೆ ಇದು ನಮ್ಮ ಕನ್ನಡ ಸಿನಿಮಾ. ಯಾವುದೇ ಕನ್ನಡ ಸಿನಿಮಾ ಆದರೂ ಕೂಡ ದಯವಿಟ್ಟು ಪ್ರೋತ್ಸಾಹ ನೀಡಿ. ನಮ್ಮ ಸಿನಿಮಾ, ನಮ್ಮ ಭಾಷೆ, ನಮ್ಮ ಜನ ಹಾಗೂ ನಮ್ಮತನಾನ ಯಾವತ್ತೂ ನಾವು ಬಿಟ್ಟುಕೊಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಬೇರೆ ರಾಜ್ಯದಲ್ಲಿ ಅವರವರ ಭಾಷೆಯ ಮೇಲೆ ಎಷ್ಟು ಅಭಿಮಾನ ಇರುತ್ತೋ, ನಮ್ಮ ಭಾಷೆಯ ಮೇಲೆ ಅಷ್ಟೇ ಅಭಿಮಾನ ಮತ್ತು ಪ್ರೀತಿ ಇರಬೇಕು. ಕನ್ನಡಿಗರು ತುಂಬಾ ವಿಶಾಲ ಹೃದಯದವರು ಮತ್ತು ಎಲ್ಲರನ್ನೂ ಪ್ರೀತಿಯಿಂದಲೇ ಸ್ವಾಗತಿಸುತ್ತೇವೆ ಯಾವಾಗಲೂ ಹೇಳುತ್ತಿರುತ್ತೇವೆ. ಆ ಗುಣ ಹಾಗೇ ಇರಲಿ, ಆದರೆ, ಕನ್ನಡ ಅಂತಾ ಬಂದಾಗ ಅದು ನಮ್ಮ ಕನ್ನಡ, ಯಾವುದೇ ಕಾರಣಕ್ಕೂ ಅದನ್ನು ಬಿಟ್ಟುಕೊಡಬಾರದು. ಕನ್ನಡ ಸಿನಿಮಾನ ದಯವಿಟ್ಟು ನೋಡಿ ಹಾಗೂ ಕನ್ನಡಿಗರನ್ನು ಬೆಳೆಸಿ ಎಂದು ರಚ್ಚು ಕೇಳಿಕೊಂಡಿದ್ದಾರೆ.
ಸರ್ಜರಿ ಮಾಡದೇ ಒಂದೇ ವ್ಯಕ್ತಿಯ ಕಿಡ್ನಿಯಲ್ಲಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು: ದೇಶದಲ್ಲೇ ಇದು ಮೊದಲು!
ವಧು ವಯೋಮಿತಿ @21: ವಿವಾಹ ವಯಸ್ಸಲ್ಲಿ ಸ್ತ್ರೀ-ಪುರುಷ ಸಮಾನತೆಗೆ ಕೇಂದ್ರ ಅಸ್ತು
ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಶಿಸ್ತುಕ್ರಮ? ಟೆಸ್ಟ್ ನಾಯಕತ್ವವೂ ಕೈಜಾರುತ್ತಾ?