ಕೋಲ್ಕತ: ಇಂದಲ್ಲ ನಾಳೆ ಇಂಧನ ದರ ಇಳಿಯಲಿದೆ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ದೇಶದ ಜನತೆಗೆ ಕೇಂದ್ರದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಬಿಗ್ ಶಾಕ್ ನೀಡಿದ್ದಾರೆ. ಇಂಧನ ದರವನ್ನು ಜಿಎಸ್ಟಿ ಅಡಿಯಲ್ಲಿ ತರಲು ರಾಜ್ಯ ಸರ್ಕಾರಗಳು ಬಯಸದೇ ಇರುವುದರಿಂದ ಇಂಧನ ದರ ಕಡಿಮೆ ಆಗುತ್ತಿಲ್ಲ ಎಂದಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ದೀಪ್ ಸಿಂಗ್ ಪುರಿ, ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಬಂಗಾಳದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ ಎಂದು ಸಮರ್ಥಿಸಿಕೊಂಡರು.
ಪೆಟ್ರೋಲ್ ಬೆಲೆಯನ್ನು ಇಳಿಸಲು ನೀವು ಬಯಸುತ್ತೀರಾ ಎಂಬ ಪ್ರಶ್ನೆಗೆ ನನ್ನ ಉತ್ತರ ಹೌದು ಎನ್ನುತ್ತೇನೆ. ಹಾಗಾದರೆ ಪೆಟ್ರೋಲ್ ಬೆಲೆ ಯಾಕೆ ಕಡಿಮೆ ಆಗುತ್ತಿಲ್ಲ ಅಂತಾ ಪ್ರಶ್ನಿಸಿದರೆ, ರಾಜ್ಯ ಸರ್ಕಾರಗಳು ಇಂಧನ ದರವನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಬಯಸದೇ ಇರುವುದೇ ಕಾರಣ ಎಂಬುದು ನನ್ನ ಉತ್ತರವಾಗಿದೆ ಎಂದು ಹೇಳಿದರು.
ಪ್ರತಿ ಲೀಟರ್ ಪೆಟ್ರೋಲ್ಗೆ ಕೇಂದ್ರ ಸರ್ಕಾರ 32 ರೂಪಾಯಿ ತೆರಿಗೆ ವಿಧಿಸಿದೆ. ಪ್ರತಿ ಬ್ಯಾರೆಲ್ ಕಚ್ಛಾತೈಲ ಬೆಲೆ 19 ಡಾಲರ್ ಇದ್ದಾಗಲೂ ನಾವು 32 ರೂ. ತೆರಿಗೆ ವಿಧಿಸಿದ್ದೇವೆ. ಅಲ್ಲದೆ, ಪ್ರತಿ ಬ್ಯಾರೆಲ್ಗೆ 75 ಡಾಲರ್ ಆದಾಗಲೂ ನಾವು 32 ರೂ. ತೆರಿಗೆಯನ್ನೇ ವಿಧಿಸುತ್ತಿದ್ದೇವೆ. ಇದರೊಂದಿಗೆ ದೇಶದ ಜನತೆಗೆ ಉಚಿತ ರೇಷನ್, ಉಚಿತ ಮನೆ ಮತ್ತು ಉಚಿತ ಬೆಳಕು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಪಶ್ಚಿಮ ಬಂಗಾಳ ಸರ್ಕಾರದ ಕಡೆ ಬೊಟ್ಟು ಮಾಡಿದ ಪೆಟ್ರೋಲಿಯಂ ಸಚಿವರು ಜುಲೈನಿಂದ ಇಲ್ಲಿಯವರೆಗೆ ಟಿಎಂಸಿ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ಗೆ 3.51 ರೂಪಾಯಿ ತೆರಿಗೆ ಏರಿಕೆ ಮಾಡಿದೆ. ಈ ಕಾರಣದಿಂದಲೇ ಇಂಧನ ದರ ನೂರರ ಗಡಿ ದಾಟಿದೆ ಎಂದರು. ಹೇಳಿಕೆ ನೀಡುವುದು ಸುಲಭ. ತೆರಿಗೆ ಏರಿಕೆ ಮಾಡದಿದ್ದರೆ, ಪೆಟ್ರೋಲ್ ದರ 100ರ ಒಳಗೆ ಇರುತ್ತಿತ್ತು ಎಂದು ಟಿಎಂಸಿ ಸರ್ಕಾರವನ್ನು ಟೀಕಿಸಿದರು.
ಹರ್ದೀಪ್ ಸಿಂಗ್ ಪುರಿ ಅವರು ಉಪಚುನಾವಣೆಯ ಪ್ರಚಾರಕ್ಕಾಗಿ ಬುಧವಾರ ಕೋಲ್ಕತ್ತಕ್ಕೆ ಆಗಮಿಸಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಮತ್ತು ಸಿಪಿಐ (ಎಂ) ನ ಶ್ರೀಜಿಬ್ ಬಿಸ್ವಾಸ್ ಕಣಕ್ಕಿಳಿದಿದ್ದು, ಬಿಜೆಪಿ ಪರ ಪೆಟ್ರೋಲಿಯಂ ಸಚಿವರು ಪ್ರಚಾರ ಮಾಡಿದರು. (ಏಜೆನ್ಸೀಸ್)
ಫೇಸ್ಬುಕ್ ಪ್ರೇಯಸಿಗೆ ಓಡಾಡಲು ಇನ್ನೋವಾ ಕಾರು, ಕೈತುಂಬಾ ಹಣ ಕೊಟ್ಟವನಿಗೆ ಕಾದಿತ್ತು ಬಿಗ್ ಶಾಕ್..!
ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!
ಮನಸ್ಸಿದ್ದರೆ ವಯಸ್ಸಿನ ಹಂಗೇಕೆ? ಬಾಳ ಇಳಿ ಸಂಜೆಯಲ್ಲಿ ಜತೆಯಾದರು- ಮಗನೇ ಮಾಡಿಸಿದ ಅಪ್ಪನ ಮದುವೆ