More

    ರಾತ್ರಿಗಸ್ತು, ಸಿಸಿ ಕ್ಯಾಮರಾ ಹೆಚ್ಚಳ;ಪೊಲೀಸ್ ಕಮಿಷನರ್

    ಬೆಂಗಳೂರು: ನಗರದಲ್ಲಿ ಮಹಿಳಾ ಪೇಯಿಂಗ್ ಗೆಸ್ಟ್‌ಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಸಲುವಾಗಿ ರಾತ್ರಿ ಗಸ್ತು, ಸಿಸಿ ಕ್ಯಾಮರಾ ಅಳವಡಿಕೆ ಹೆಚ್ಚಿಸುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

    ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಮಾಸಿಕ ಜನಸಂಪರ್ಕ ದಿವಸ್‌ನಲ್ಲಿ ಭಾಗವಹಿಸಿ ಜನರ ಅಹವಾಲುಗಳನ್ನು ಬಿ. ದಯಾನಂದ್ ಸ್ವೀಕರಿಸಿದರು. ವಸಂತನಗರದಲ್ಲಿ ಮಹಿಳಾ ಪಿಜಿಗಳೇ ಹೆಚ್ಚಾಗಿವೆ. ಕೆಲಸ ಮುಗಿಸಿ ತಡರಾತ್ರಿ ಪಿಜಿಗೆ ಬರುವಾಗ ಯುವತಿಯರನ್ನು ಕೆಲವು ಯುವಕರು ಚುಡಾಯಿಸುತ್ತಾರೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ರಾತ್ರಿಗಸ್ತನ್ನು ಹೆಚ್ಚಳ ಮಾಡಬೇಕು. ವೈಯಲಿಕಾವಲ್‌ನಲ್ಲಿ ಕೆಲ ಪುಂಡರು ರಾತ್ರಿ ವೇಳೆ ತೊಂದರೆ ನೀಡುತ್ತಾರೆ. ಎಲ್ಲೆಂದರಲ್ಲಿ ನಿಂತು ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಕೆಲ ಸಾರ್ವಜನಿಕರು ದೂರು ನೀಡಿದರು.

    ಇದಕ್ಕೆ ಉತ್ತರಿಸಿದ ಆಯುಕ್ತರು, ಅಪರಾಧ ನಿಯಂತ್ರಣಕ್ಕೆ ರಾತ್ರಿ ಗಸ್ತು ಹೆಚ್ಚಳ ಮಾಡಲಾಗುತ್ತದೆ. ಜತೆಗೆ ಸಿಸಿ ಕ್ಯಾಮರಾಗಳನ್ನು ಎಲ್ಲೆಲ್ಲಿ ಅಳವಡಿಸಬೇಕು ಎಂಬುದನ್ನು ಗುರುತಿಸಿ ಹೆಚ್ಚುವರಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದರು. ಪ್ಯಾಲೆಸ್ ಗುಟ್ಟಹಳ್ಳಿಯ ವಿನಾಯಕ ಸರ್ಕಲ್‌ನ ಎರಡು ಕಡೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬಹುತೇಕ ಪ್ರದೇಶಗಳಲ್ಲಿ ಬೀದಿ ದೀಪಗಳು ಇಲ್ಲ. ಹೀಗಾಗಿ ರಾತ್ರಿ ವೇಳೆ ಓಡಾಡಲು ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆಯುಕ್ತರ ಗಮನಕ್ಕೆ ತಂದರು.

    ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಚಾರ ವಿಭಾಗ ಡಿಸಿಪಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಇನ್ನು ಬೀದಿ ದೀಪಗಳ ಅಳವಡಿಕೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಕೇಂದ್ರ ವಿಭಾಗ ಡಿಸಿಪಿ ಎಚ್. ಶೇಖರ್, ಸಂಚಾರ ವಿಭಾಗ ಡಿಸಿಪಿ ಅನಿತಾ ಹದ್ದಣ್ಣನವರ್ ಹಾಗೂ ಕೇಂದ್ರ ವಿಭಾಗದ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts