ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಿನ್ನೆಯಷ್ಟೇ ಸಿಎಂ ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಶಿಕ್ಷಕರೊಬ್ಬರು ಸಿಎಂ ಯೋಗಿಗೆ ಸವಾಲು ಹಾಕಿದ್ದು, ಅವರು ಸ್ಪರ್ಧಿಸುವ ಗೋರಖ್ಪುರ ಕ್ಷೇತ್ರದಿಂದಲೇ ಚುನಾವಣಾ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ಅಲ್ಲದೆ, ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಪ್ರಚಾರ ಮಾಡುವುದಾಗಿಯೂ ಹೇಳಿದ್ದಾರೆ.
ಮಾಜಿ ಶಿಕ್ಷಕ ವಿಜಯ್ ಸಿಂಗ್ ಭಷ್ಟಾಚಾರ ವಿರೋಧಿ ಕಾರ್ಯಕರ್ತ. ಭೂ ಮಾಫಿಯಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕಳೆದ 26 ವರ್ಷದಿಂದಲೂ ಮುಜಾಫರ್ನಗರದಲ್ಲಿ ಧರಣಿಗೆ ಕುಳಿತಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಭೂ ಮಾಫಿಯಾದವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದು, ಇಂದಿಗೂ ನ್ಯಾಯಕ್ಕಾಗಿ ಧರಣಿಯನ್ನು ಮುಂದುವರಿಸಿದ್ದಾರೆ.
ಚುನಾವಣೆಯ ಬಗ್ಗೆ ಮಾತನಾಡಿರುವ ವಿಜಯ್ ಸಿಂಗ್, ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಗೋರಖ್ಪುರ ಗ್ರಾಮೀಣ ಕ್ಷೇತ್ರದಿಂದ ಫೆ.9ರಂದು ನಾಮಪತ್ರ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. ಗೋರಖ್ಪುರ ಗ್ರಾಮೀಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಫೆ.11 ಕೊನೆಯ ದಿನಾಂಕ. ಮಾರ್ಚ್ 3ರಂದು ಚುನಾವಣೆ ನಡೆಯಲಿದೆ.
ಕಳೆದ 26 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ ಯಾವ ಪಕ್ಷವೂ ಕೂಡ ಭ್ರಷ್ಟಾಚಾರ ಮತ್ತು ಭೂ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಗಂಭೀರ ಚಿಂತನೆಯು ನಡೆಸಿಲ್ಲ ಎಂಬುದನ್ನು ಜನರಿಗೆ ತಿಳಿಸಲು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ವಿಜಯ್ ಸಿಂಗ್ ಹೇಳಿದ್ದಾರೆ. ಸಿಎಂ ಯೋಗಿ ಗೋರಖ್ಪುರ ಗ್ರಾಮೀಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಕೆಲವೇ ಸಮಯದಲ್ಲಿ ವಿಜಯ್ ಸಿಂಗ್ ಈ ಮಾತುಗಳನ್ನಾಡಿದ್ದಾರೆ.
ಮೀರತ್ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಭೂಗೋಳಶಾಸ್ತ್ರ ವಿಭಾಗದಲ್ಲಿ ಪದವಿ ಮಗಿಸಿರುವ ವಿಜಯ್ ಸಿಂಗ್ ಬಿಇಡಿ ಮುಗಿಸಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 1990ರ ದಶಕದಲ್ಲಿ ಒಮ್ಮೆ ಮನೆಯಿಂದ ಶಾಲೆಗೆ ಹೋಗುವಾಗ ನಡೆದ ಒಂದು ಘಟನೆ ಅವರ ಬದುಕಿನ ಗತಿಯನ್ನೇ ಬದಲಿಸಿತು.
ರೋಟಿ ಬೇಕು ಅಂತಾ ಮಗುವೊಂದು ತಾಯಿಯ ಮುಂದೆ ಅಳುತ್ತಿರುವುದನ್ನು ನೋಡಿದೆ. ಆದರೆ, ತಾಯಿ ಆಹಾರ ನೀಡಲಿಲ್ಲ. ನಮ್ಮ ಹಳ್ಳಿಯ ಸುತ್ತಮುತ್ತಲಿನ ಸಾವಿರಾರು ಗ್ರಾಮಗಳ ಭೂಮಿಯನ್ನು ಪ್ರಬಲ ರಾಜಕಾರಣಿಗಳು ಅತಿಕ್ರಮಿಸಿಕೊಂಡಿರುವುದನ್ನು ಕಂಡು ನನಗೆ ನೋವಾಯಿತು ಎಂದು ಹೇಳಿದರು.
1996ರಲ್ಲಿ ಮುಜಾಫರ್ನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಜಯ್ ಸಿಂಗ್ ಧರಣಿ ಕುಳಿತರು. ಅಲ್ಲದೆ, ಭೂಮಿ ಅತಿಕ್ರಮದ ಬಗ್ಗೆ ಜಿಲ್ಲೆಯ ಅಧಿಕಾರಿಗಳು, ರೆವಿನ್ಯೂ ಕೋರ್ಟ್ ಮತ್ತು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಕೈರಾನಾದಲ್ಲಿ ಯೋಗಿ ಆದಿತ್ಯನಾಥ್ ಭಾಷಣ ಮಾಡಿದ ಸಾರ್ವಜನಿಕ ಸಮಾವೇಶದಲ್ಲಿ ವಿಜಯ್ ಸಿಂಗ್ ಅವರು ಗದ್ದಲವನ್ನು ಕೂಡ ಸೃಷ್ಟಿಸಿದರು.
ಭೂಮಾಫಿಯಾ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಯೋಗಿ ಆದಿತ್ಯನಾಥ್ ಅವರನ್ನು ಬೇಡಿಕೆಗಳ ಜ್ಞಾಪಕ ಪತ್ರದೊಂದಿಗೆ ಭೇಟಿಯಾಗಲು ಯತ್ನಿಸಿದಾದರೂ ಭೇಟಿ ಮಾಡಲು ಅವರಿಗೆ ಅನುಮತಿ ನೀಡಲಿಲ್ಲ. ಆದರೆ ಅವರ ಪತ್ರಗಳನ್ನು ಅಧಿಕಾರಿಗಳು ಸ್ವೀಕರಿಸಿದರು ಕೂಡ ಈವರೆಗೂ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.
ಆಕ್ರಮಿತ ಭೂಮಿಗಳು ಬಡವರು ಮತ್ತು ಭೂರಹಿತರು ಕೃಷಿ ಮಾಡಲು ಉದ್ದೇಶಿಸಿರುವ ಸರ್ಕಾರಿ ಭೂಮಿಗಳಾಗಿವೆ. ಆದರೆ, ಆಡಳಿತ ಪಕ್ಷಗಳು ಮತ್ತು ಭೂ ಮಾಫಿಯಾಗಳ ಶಾಮೀಲಾಗಿ ಬಡವರ ಹಕ್ಕು ಮತ್ತು ಆಹಾರವನ್ನು ಕಸಿದುಕೊಂಡಿವೆ. ಮುಜಾಫರ್ನಗರ ಮತ್ತು ಶಾಮ್ಲಿ ಒಂದರಲ್ಲೇ ಸುಮಾರು 7 ಲಕ್ಷ ಬಿಘಾ ಭೂಮಿಯನ್ನು ಭೂ ಮಾಫಿಯಾ ಅತಿಕ್ರಮಿಸಿಕೊಂಡಿದೆ ಎಂದು ವಿಜಯ್ ಸಿಂಗ್ ಆರೋಪಿಸಿದರು.
ಇಲ್ಲ, ನಾನು ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಭೂ ಮಾಫಿಯಾ ವಿರುದ್ಧ ಏನನ್ನೂ ಮಾಡಿಲ್ಲ. ಅವರ ವಿರುದ್ಧವೂ ಪ್ರಚಾರ ನಡೆಸುತ್ತೇನೆ ಎಂದು ವಿಜಯ್ ಸಿಂಗ್ ಹೇಳಿದ್ದಾರೆ. ಅಖಿಲೇಷ್ ಸ್ಪರ್ಧಿಸುವ ಕರ್ಹಾಲ್ ಕ್ಷೇತ್ರಕ್ಕೆ ತೆರಳಿ ಅವರ ವಿರುದ್ಧ ಪ್ರಚಾರ ಮಾಡುತ್ತೇನೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ.
ನನ್ನ ಅಗತ್ಯಗಳನ್ನು ನೋಡಿಕೊಳ್ಳುವ ಮೂರು-ನಾಲ್ಕು ಸ್ನೇಹಿತರಿದ್ದಾರೆ. ನನ್ನ ಅಗತ್ಯಗಳು ಸೀಮಿತವಾಗಿವೆ. ನಾನೂ ಕೂಡ ಒಂದಿಷ್ಟು ಬಿಘಾ ಜಮೀನು ಹೊಂದಿರುವ ರೈತ ಎಂದರು. ಸುಮಾರು 60 ವರ್ಷ ವಯಸ್ಸಿನ ವಿಜಯ್ ಸಿಂಗ್ ಅವರು ಪಶ್ಚಿಮ ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಇಬ್ಬರಿಗೂ ವಿವಾಹವಾಗಿದೆ ಮತ್ತು ಒಬ್ಬ ಮಗನಿದ್ದಾನೆ. ಈಗಲೂ ನ್ಯಾಯಕ್ಕಾಗಿ ತಮ್ಮ ಧರಣಿಯನ್ನು ಮುಂದುವರಿಸಿದ್ದಾರೆ. ಆದರೆ, ಸರ್ಕಾರಗಳು ಮಾತ್ರ ಅವರತ್ತ ಇನ್ನೂ ಗಮನ ಹರಿಸಿಯೇ ಇಲ್ಲ. (ಏಜೆನ್ಸೀಸ್)
ಭಾವೈಕ್ಯ ಸಂದೇಶ ಸಾರುತ್ತಿದ್ದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ
ಎಲ್ಲರೂ ಕಾಲೇಜಿಗೆ ಜಾಬ್ಗಾಗಿ ಬರುತ್ತಾರೆ, ನೀವು ಹಿಜಾಬ್ಗಾಗಿ ಬರುತ್ತೀದ್ದೀರಾ?: ಸಂಸದ ಪ್ರತಾಪ್ ಸಿಂಹ
ಗೂಗಲ್ನಲ್ಲಿ ಕೆಲಸ ಗಿಟ್ಟಿಸಿದ ಯುವಕ: ಈ ಹಿಂದಿನ ಮತ್ತು ಈಗಿನ ಸಂಬಳದ ಅಂತರ ಕೇಳಿದ್ರೆ ಬೆರಗಾಗ್ತೀರಾ!