ಕಲಬುರಗಿ: ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿದ್ದಕ್ಕೆ ಸಬ್ ಇನ್ಸ್ಪೆಕ್ಟರ್ ವಿರುದ್ಧ ಗರಂ ಆಗಿರುವ ಪೊಲೀಸ್ ಕಾನ್ಸ್ಟೇಬಲ್, ಪಿಎಸ್ಐ ಲಂಚಾವತಾರದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ.
ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯಪ್ಪ ಮತ್ತು ಕಾನ್ಸ್ಟೇಬಲ್ ಪರುಶುರಾಮ್ ನಡುವಿನ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಕಾನ್ಸ್ಟೇಬಲ್ ಪರುಶುರಾಮ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಿಎಸ್ಐ ಅಯ್ಯಪ್ಪ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ವಿಚಾರ ಕಾನ್ಸ್ಟೇಬಲ್ಗೆ ತಿಳಿದ ಕೂಡಲೇ ಪಿಎಸ್ಐಗೆ ಕರೆ ಮಾಡಿ ಠಾಣೆಯಲ್ಲಿ ನಡೆಯುವ ಕರ್ಮಕಾಂಡವನ್ನೆಲ್ಲ ಎಳೆ ಎಳೆಯಾಗಿ ಬಯಲು ಮಾಡಿದ್ದಾರೆ.
ನೀವು ಮೇಲಾಧಿಕಾರಿಗಳಿಗೆ ನನ್ನ ಬಗ್ಗೆ ರಿಪೋರ್ಟ್ ಕೊಟ್ಟಿದ್ದೀರಾ ಎಂದು ಕಾನ್ಸ್ಟೇಬಲ್ ಪರುಶುರಾಮ್, ಪಿಎಸ್ಐ ಅಯ್ಯಪ್ಪರನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ಅಯ್ಯಪ್ಪ ನೀವು ಎಸ್ಪಿ ಅವರನ್ನು ಕೇಳಬೇಕು ಎಂದು ಹೇಳುತ್ತಾರೆ. ಇದರಿಂದ ಗರಂ ಆಗುವ ಪರುಶುರಾಮ್, ನೀವು ಪೊಲೀಸ್ ಠಾಣೆಯ ಒಳಗೆ ಮಟ್ಕಾ, ಇಸ್ಪೀಟ್, ಬಾರ್ ಸೇರಿದಂತೆ ಎಲ್ಲರಿಂದ ಪ್ರತಿ ತಿಂಗಳು ಮಾಮೂಲಿ ತೆಗೆದುಕೊಳ್ಳುತ್ತೀರಿ ಎಲ್ಲವನ್ನು ಬಿಚ್ಚಿಡಬೇಕಾ ಎಂದಿದ್ದಾರೆ.
ಇಷ್ಟೇ ಅಲ್ಲದೆ, ಮುಂದುವರಿದು ಮಾತನಾಡಿರುವ ಪರುಶುರಾಮ್, ಬಾರ್ನಿಂದ ಪುಕ್ಸಟ್ಟೆಯಾಗಿ ಬರುವ ಎಣ್ಣೆಯನ್ನು ಠಾಣೆಯ ಒಳಗಡೆ ಸಮವಸ್ತ್ರದಲ್ಲೇ ಕುಡಿಯುತ್ತೀರಿ. ಪೊಲೀಸ್ ಜೀಪ್ ಒಳಗಡೆಯೂ ಮದ್ಯಪಾನ ಮಾಡುತ್ತೀರಿ. ನೀವು ಎಣ್ಣೆ ಹೊಡೆಯುವುದು ಮತ್ತು ಬಾರ್ನಿಂದ ಎಣ್ಣೆ ಪೂರೈಕೆಯಾಗುವ ವಿಡಿಯೋಗಳು ಇವೆ. ನೀವು ಏನೆಲ್ಲ ಅವ್ಯವಹಾರ ಮಾಡುತ್ತೀರಾ, ಅದಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋ ರೆಕಾರ್ಡಿಂಗ್ ಇವೆ ಎಂದು ಎಳೆ ಎಳೆಯಾಗಿ ಠಾಣೆಯ ಕರ್ಮಕಾಂಡವನ್ನು ತೆರೆದಿಟ್ಟಿದ್ದಾರೆ.
ಪರುಶುರಾಮ್ ಸಾಲು ಸಾಲು ಆರೋಪ ಮಾಡಿದರೂ ಪಿಎಸ್ಐ ಅಯ್ಯಪ್ಪ ಹೆಚ್ಚು ಮಾತನಾಡದೇ ಇದನೆಲ್ಲ ಫೋನ್ನಲ್ಲಿ ಮಾತನಾಡಬಾರದು, ಅಧಿಕಾರಿಯ ಜತೆ ಹೇಗೆ ಮಾತನಾಡಬೇಕೆಂಬುದನ್ನು ಕಲಿತುಕೋ ಎಂದಿದ್ದಾರೆ. ಎಷ್ಟೇ ಹೇಳಿದರೂ ಪಿಎಸ್ಐ ಮಾತಿಗೆ ಬಗ್ಗದ ಪರುಶುರಾಮ್ ಠಾಣೆಯ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದು, ಅದರ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)
ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ 65ರ ವೃದ್ಧೆ ಸಾವು: ನರ್ಸ್ ಮುಂದೆ ಬಿಚ್ಚಿಟ್ಟ ಸತ್ಯದಿಂದ ಆರೋಪಿ ಬಂಧನ!
ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಂದ್ರೆ ಜಾಸ್ತಿ ಹಣ ಮಾಡ್ಬೇಡಿ, ಇಲ್ಲಾಂದ್ರೆ ಈ ರೀತಿ ಆಗುತ್ತೆ ಅಂದ್ರು ಕೆಜಿಎಫ್ ಬಾಬು!