ಹೈದರಾಬಾದ್: ಜುಲೈ 6ರಂದು ಹೈದರಾಬಾದ್ನ ಹಸ್ತಿನಾಪುಂರನಲ್ಲಿನ ಬಿ.ಎನ್. ರೆಡ್ಡಿ ನಗರದಲ್ಲಿ ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವನಸ್ಥಲಿಪುರಂ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಮರ್ರೆಡ್ಪಲ್ಲಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ನನ್ನು ನಾಗೇಶ್ವರ್ ರಾವ್ ಕರಾಳ ಮುಖ ಒಂದೊಂದಾಗಿ ಬಯಲಾಗುತ್ತಿದ್ದು, ಆರೋಪಿಯ ಹಿನ್ನೆಲೆ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಶ್ವರ್ ರಾವ್ ಮಾಡಿರುವ ಕೃತ್ಯ ಸಾಬೀತಾಗಿದೆ. ಗಂಡನಿಲ್ಲದ ಸಮಯದಲ್ಲಿ ಮಹಿಳೆಯ ಮೇಲೆ ನಾಗೇಶ್ವರ್, ಅತ್ಯಾಚಾರ ಎಸಗಿದ್ದ. ಅಲ್ಲದೆ, ಆಕೆಯ ಗಂಡ ಮನೆಗೆ ಬಂದಾಗ ಆತನನ್ನು ಗನ್ ತೋರಿಸಿ, ಬೆದರಿಕೆ ಹಾಕಿದ್ದ. ಇದಾದ ಬಳಿಕ ಗಂಡ-ಹೆಂಡತಿಯನ್ನು ತನ್ನ ಕಾರಿನಲ್ಲಿ ಅಪಹರಿಸಿಕೊಂಡು ಹೋಗುವಾಗ ಇಬ್ರಾಹಿಂಪಟ್ಟಣ ಕೆರೆಯ ಬಳಿ ಕಾರು ಅಪಘಾತಕ್ಕೀಡಾಗಿದ್ದರಿಂದ ಗಂಡ-ಹೆಂಡತಿ ತಪ್ಪಿಸಿಕೊಂಡು ಬಂದು ವನಸ್ಥಲಿಪುರಂನಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಆರೋಪಿ ನಾಗೇಶ್ವರ್ ರಾವ್ರನ್ನು ಬಂಧಿಸಲಾಯಿತು.
ನಾಗೇಶ್ವರ್ ರಾವ್ನನ್ನು ನಿನ್ನೆ (ಜುಲೈ 12) ರಾತ್ರಿ ಹಯಾತ್ ನಗರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸದ್ಯ ನಾಗೇಶ್ವರ್ ರಾವ್ ಚರ್ಲಪಲ್ಲಿ ಜೈಲಿನಲ್ಲಿ ಇರಿಸಲಾಗಿದೆ. ಖಾಕಿ ಹಾಕಿಕೊಂಡು ನಾಗೇಶ್ವರ್ ರಾವ್ ಮಾಡಿರುವ ದುಷ್ಕೃತ್ಯಗಳು ರಿಮ್ಯಾಂಡ್ ವರದಿಯಲ್ಲಿ ಬಯಲಾಗಿದೆ. ಈತ ಖಾಕಿ ಧರಿಸಿದ್ದ ಗೋಮುಖ ವ್ಯಾಘ್ರ ಎಂಬುದು ಬಹಿರಂಗವಾಗಿದೆ.
ನಾಗೇಶ್ವರ್ ರಾವ್ ಖಾಕಿ ಹಾಕಿಕೊಂಡೇ ಅನೇಕರನ್ನು ಕೊಲೆ ಮಾಡಿದ್ದಾನೆ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ. ಕೋಟಿಗಟ್ಟಲೆ ಅಕ್ರಮ ಹಣ ಪತ್ತೆಯಾಗಿದೆ. ಅನೇಕ ಬಾರಿ ದಾಳಿ ನಡೆಸಿದ ಸಂದರ್ಭದಲ್ಲಿ ಡೀಲಿಂಗ್ ಮಾಡಿಕೊಂಡು ಸಾಕಷ್ಟು ಹಣ ಸಂಗ್ರಹಣೆ ಮಾಡಿರುವ ಆರೋಪ ಕೇಳಿಬಂದಿದೆ. ಹಣವನ್ನು ಸಂಗ್ರಹಿಸಲೆಂದೇ ಈತ ಮೂವರು ಪ್ರೈವೆಟ್ ಏಜೆಂಟ್ಗಳನ್ನು ನೇಮಿಸಿಕೊಂಡಿದ್ದ. ಸಂಗ್ರಹವಾದ ಅಕ್ರಮ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡುತ್ತಿದ್ದ. ಕ್ರಿಮಿನಲ್ಗಳ ಜೊತೆ ಸಂಪರ್ಕದಲ್ಲಿದ್ದ ನಾಗೇಶ್ವರ್ ರಾವ್ ಅವರ ಜೊತೆ ಸೇರಿ ಸಾಕಷ್ಟು ಅಪರಾಧಗಳನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ. ಮರ್ರೆಡ್ಪಲ್ಲಿಯಲ್ಲಿ ನಾಗೇಶ್ವರ್ ರಾವ್ಗೆ ಭಾರೀ ಸಂಪರ್ಕವಿತ್ತು. ಅಲ್ಲದೆ, ಹಿರಿಯ ಅಧಿಕಾರಿಗಳೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ. ಈತನ ವಿರುದ್ಧ ಈ ಹಿಂದೆಯೇ ಸಾಕಷ್ಟು ದೂರುಗಳು ಬಂದರೂ ಯಾವುದೇ ಸಾಕ್ಷ್ಯಾಧರಗಳು ಇಲ್ಲದಿದ್ದರಿಂದ ಯಾರೊಬ್ಬರು ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ತನ್ನ ಮಾತನ್ನು ಕೇಳದವರನ್ನು ಟಾರ್ಗೆಟ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆದರೆ, ಪಾಪದ ಕೊಡ ತುಂಬಲೇ ಬೇಕು ಎನ್ನುವಂತೆ ಓರ್ವ ವಿವಾಹಿತ ಮಹಿಳೆಯ ಮೇಲೆ ತನ್ನ ಕಾಮದ ಕಣ್ಣು ಹಾಯಿಸಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾಗಿದೆ. ಸಿಸಿಟಿವಿ ಸಾಕ್ಷ್ಯಾಧಾರಗಳು ಸಹ ಲಭ್ಯವಾಗಿವೆ.
ಘಟನೆ ಹಿನ್ನೆಲೆ ಏನು?
ಕಳೆದ ಶುಕ್ರವಾರ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. 2018ರಲ್ಲಿ ಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯನ್ನು ಸಿಐ ನಾಗೇಶ್ವರ್ ರಾವ್ ನಡೆಸಿದ್ದರು. ನನ್ನ ಗಂಡ ಬಿಡುಗಡೆಯಾದ ಬಳಿಕ ನಾಗೇಶ್ವರ್, ಒತ್ತಾಯದ ಮೇರೆಗೆ ಅವರ ಫಾರ್ಮ್ಹೌಸ್ನಲ್ಲೇ ಕೆಲಸ ಮಾಡುತ್ತಿದ್ದರು. 2021ರ ಫೆಬ್ರವರಿ ವರೆಗೆ ನನ್ನ ಪತಿ ಫಾರ್ಮ್ ಹೌಸ್ನಲ್ಲಿ ದುಡಿದರು. ಒಂದು ದಿನ ನನ್ನ ಪತಿ, ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ತಿಳಿಯದಂತೆ ನನ್ನನ್ನು ಬಲವಂತವಾಗಿ ಅವರ ಕೃಷಿ ಭೂಮಿಗೆ ಕರೆತಂದಿದ್ದರು. ಈ ವಿಚಾರ ತಿಳಿದು ತಕ್ಷಣವೇ ನನ್ನ ಪತಿ, ನಾಗೇಶ್ವರ್ ರಾವ್ಗೆ ಕರೆ ಮಾಡಿ, ಕುಟುಂಬಕ್ಕೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರು. ನಿಮ್ಮ ವರ್ತನೆಯ ಬಗ್ಗೆ ನಿಮ್ಮ ಹೆಂಡತಿಗೆ ತಿಳಿಸುವುದಾಗಿ ಇನ್ಸ್ಪೆಕ್ಟರ್ಗೆ ಎಚ್ಚರಿಸಿದ್ದರು.
ಇದಾದ ಬಳಿಕ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡುವಂತೆ ನಾಗೇಶ್ವರ್ ಕೇಳಿಕೊಂಡರು. ಆದರೆ, ಇದಾದ ಬಳಿಕ ಅವರು ತಮ್ಮ ನರಿಬುದ್ಧಿಯನ್ನು ತೋರಿಸಿದರು. ಕೆಲವು ಪೊಲೀಸರು ನಮ್ಮ ಮನೆಗೆ ಬಂದು ಪತಿಯನ್ನು ಟಾಸ್ಕ್ಫೋರ್ಸ್ ಪೊಲೀಸ್ ಕಚೇರಿಗೆ ಕರೆದೊಯ್ದು ಥಳಿಸಿದರು. ಪತಿಯ ಕೈಯಲ್ಲಿ ಗಾಂಜಾ ಪೊಟ್ಟಣಗಳನ್ನು ಕೊಟ್ಟು ಸುಳ್ಳು ಪ್ರಕರಣ ದಾಖಲಿಸಿದರು. ಯಾವುದೇ ವಿಚಾರವನ್ನು ನಮ್ಮ ಮನೆಗೆ ತಿಳಿಸಿದರೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ನಾಗೇಶ್ವರ್ ಬೆದರಿಕೆ ಹಾಕಿದರು.
ಜುಲೈ 6 ರಂದು ನಾಗೇಶ್ವರ್ ರಾವ್ ಗಂಡನಿಲ್ಲದ ಸಮಯದಲ್ಲಿ ನನ್ನ ಮನೆಗೆ ಬಂದು ಲೈಂಗಿಕ ಆಸೆಗಳನ್ನು ಪೂರೈಸುವಂತೆ ಕೇಳಿದರು ಮತ್ತು ಕೆಟ್ಟ ಭಾಷೆಯನ್ನೂ ಬಳಸಿದರು. ಈ ವಿಚಾರವನ್ನು ನನ್ನ ಪತಿಗೆ ಹೇಳಿದೆ. ತಕ್ಷಣ ಅವರು ಮನೆಗೆ ಬಂದರು. ಆದರೆ, ಜುಲೈ 7ರಂದು ಮನೆಗೆ ನುಗ್ಗಿದ ನಾಗೇಶ್ವರ್, ಚೆನ್ನಾಗಿ ಥಳಿಸಿ, ಅತ್ಯಾಚಾರ ಎಸಗಿದರು. ಇದೇ ಸಂದರ್ಭದಲ್ಲಿ ಮನೆಗೆ ಬಂದ ನನ್ನ ಪತಿ ದೊಣ್ಣೆಯಿಂದ ನಾಗೇಶ್ವರ್ ಮೇಲೆ ದಾಳಿ ಮಾಡಲು ಮುಂದಾದರು. ಈ ವೇಳೆ ರಿವಾಲ್ವರ್ ತೋರಿಸಿ ಬೆದರಿಸಿದರು. ಹೈದರಾಬಾದ್ ತೊರೆಯುವಂತೆ ಒತ್ತಾಯಿಸಿದರು. ಬಳಿಕ ಕಾರಿನಲ್ಲಿ ನಮ್ಮನ್ನು ಬಲವಂತವಾಗಿ ಕೂರಿಸಿಕೊಂಡು ಹೋಗುತ್ತಿರುವಾಗ ಕಾರು ಅಪಘಾತಕ್ಕೀಡಾಯಿತು. ನಾವು ಅವರಿಂದ ತಪ್ಪಿಸಿಕೊಂಡು ಬಂದೆವು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)
ಯಶಿಕಾ ಆನಂದ್ ಬಿಕಿನಿ ಫೋಟೋ ವೈರಲ್: ನಟಿಯ ಹಾಟ್ ಅವತಾರ ಕಂಡು ಹುಬ್ಬೇರಿಸಿದ ನೆಟ್ಟಿಗರು!
ಬಂಧನ ಭಯ…ಪರಾರಿಯಾದ ಗೋತಬಯ! ಇಂದು ಬೆಳಗ್ಗೆಯೇ ವಿಮಾನದಲ್ಲಿ ಲಂಕಾ ಅಧ್ಯಕ್ಷರು ಹಾರಿದ್ದೆಲ್ಲಿಗೆ?
ಪಿಂಚಣಿ ಆಸೆಗೆ ವಯೋವೃದ್ಧಿ: ವಯಸ್ಸು ತಿದ್ದುಪಡಿಗೆ ಆಧಾರ್ ಗೋಲ್ಮಾಲ್; ಸುಳ್ಳು ಪ್ರಮಾಣಪತ್ರ ದಂಧೆ..