ಚೆನ್ನೈ: ಸೂಪರ್ ಸ್ಟಾರ್ ಸೂರ್ಯ ಅವರ ತಮಿಳು ಚಲನಚಿತ್ರ ‘ಜೈಭೀಮ್’ ವಿಶ್ವದಾದ್ಯಂತ ಮೆಚ್ಚುಗೆ ಪಾತ್ರವಾಗಿದ್ದಲ್ಲದೆ, ತಮಿಳುನಾಡಿನಲ್ಲಿ ವಿವಾದಕ್ಕೆ ಸಿಲುಕಿತು. ಚಿತ್ರದ ಕೆಲವು ಅಂಶಗಳು ಸ್ಥಳೀಯ ವನ್ನಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸೂರ್ಯ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಕಳೆದ ಭಾನುವಾರ ನಟ ಸೂರ್ಯ, ನಿರ್ದೇಶಕ ಜ್ಞಾನವೇಲು ಜೊತೆಯಾಗಿ ಹೈಕೋರ್ಟ್ ಮೆಟ್ಟಿಲೇರಿ, ತಮ್ಮ ವಿರುದ್ಧ ಚೆನ್ನೈನ ವೇಲಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಈ ಸಂಬಂಧ ನಿನ್ನೆ (ಜುಲೈ 18) ತೀರ್ಪು ನೀಡಿರುವ ಮದ್ರಾಸ್ ಹೈಕೋರ್ಟ್, ಜುಲೈ 23ರ ಸೂರ್ಯ ಹುಟ್ಟುಹಬ್ಬಕ್ಕೂ ಮುನ್ನವೇ ಉಡುಗೊರೆಯನ್ನು ನೀಡಿದೆ.
ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿ ರುದ್ರ ವನ್ನಿಯಾರ್ ಸೇನೆಯ ಕೆ.ಸಂತೋಷ್ ಎಂಬುವರು ತಮ್ಮ ಸಮುದಾಯಗ ಸಂಘಟನೆ ಜೊತೆ ಸೇರಿ ಸೂರ್ಯ ಮತ್ತು ಜ್ಞಾನವೇಲು ವಿರುದ್ಧ ದೂರು ದಾಖಲಿಸಿದ್ದರು. ಚಿತ್ರದಲ್ಲಿ ಖಳನಾಯಕನಿಗೆ ಗುರು ಎಂದು ಹೆಸರಿಸಿರುವುದು ಅವರ ಸಮುದಾಯದ ನಾಯಕರೊಬ್ಬರ ಮೇಲಿನ ದಾಳಿಯಾಗಿದೆ. ಈ ಚಲನಚಿತ್ರವನ್ನು “ವನ್ನಿಯಾರ್ ಫೋಬಿಯಾ” ದಿಂದ ನಿರ್ಮಿಸಲಾಗಿದೆ ಮತ್ತು “ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ” ಎಂದು ಅರ್ಜಿದಾರರು ಆರೋಪಿಸಿದ್ದರು.
ನಿನ್ನೆ ಇದರ ವಿಚಾರಣೆ ನಡೆಸಿದ ಹೈಕೋರ್ಟ್, ದೂರು ಸಂಬಂಧ ಸೂರ್ಯ ಮತ್ತು ಜ್ಞಾನವೇಲು ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ ಮತ್ತು ಈ ಪ್ರಕರಣವನ್ನು ಮತ್ತೆ ಜುಲೈ 21ಕ್ಕೆ ಮುಂದೂಡಿದೆ.
ಅಂದಹಾಗೆ ಜೈಭೀಮ್ ಸಿನಿಮಾ 2021ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಯಿತು. ಇದು ನೈಜ ಕತೆಯಾಧಾರಿತ ಸಿನಿಮಾ ಆಗಿದ್ದು, ವಿಶ್ವದಾದ್ಯಂತ ಭಾರೀ ಮೆಚ್ಚುಗೆ ಗಳಿಸಿತು. ಅಲ್ಲದೆ, ಆಸ್ಕರ್ ನಾಮಿನೇಷನ್ ರೇಸ್ನಲ್ಲೂ ಈ ಸಿನಿಮಾ ಇತ್ತು. ಬುಡಕಟ್ಟು ಜನಾಂಗದ ಮೇಲೆ ಪೊಲೀಸ್ ದೌರ್ಜನ್ಯವನ್ನು ಸಾರುವ ಈ ಸಿನಿಮಾವನ್ನು ಇಡೀ ದೇಶವೇ ಕೊಂಡಾಡಿತು. ಸೂರ್ಯ ಅವರ ನಟನೆಗೆ ಎಲ್ಲರೂ ತಲೆಬಾಗಿದರು. (ಏಜೆನ್ಸೀಸ್)
80ರ ಗಡಿ ಮುಟ್ಟಿದ ರೂಪಾಯಿ: 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರ