ತಿರುವನಂತಪುರಂ: ಮಹಿಳಾ ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೆ ಒಳಗಾದ ಎಂಟು ವರ್ಷದ ಬಾಲಕಿಗೆ ಹೈಕೋರ್ಟ್ ಆದೇಶದ ಅನ್ವಯ 1.5 ಲಕ್ಷ ರೂಪಾಯಿ ಪರಿಹಾರ ಹಣ ನೀಡಲು ಕೇರಳ ಸರ್ಕಾರ ನಿರ್ಧರಿಸಿದ್ದು, ಆ ಹಣವನ್ನು ಪೊಲೀಸ್ ಅಧಿಕಾರಿ ರೆಜಿತಾರಿಂದ ಸಂಗ್ರಹಿಸಲು ಗೃಹ ಸಚಿವಾಲಯ ಮುಂದಾಗಿದೆ.
ಕಾನೂನು ಹೋರಾಟಕ್ಕೆ ಖರ್ಚಾದ 25 ಸಾವಿರ ರೂ. ಹಣವನ್ನು ಸಹ ಪಾವತಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು. ಆ ಹಣವನ್ನು ಸಹ ರೆಜಿತಾರಿಂದ ಗೃಹ ಸಚಿವಾಲಯ ವಸೂಲಿ ಮಾಡಲಿದೆ. ಈ ಮೂಲಕ ಸುಮಾರು 6 ತಿಂಗಳಿಗೂ ಹೆಚ್ಚು ಕಾಲದ ಬಾಲಕಿಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಘಟನೆಯ ಹಿನ್ನೆಲೆ ಏನು?
ಆಗಸ್ಟ್ 27ರಂದು ನಡೆದ ಘಟನೆ ಇದಾಗಿದೆ. 38 ವರ್ಷದ ಜಯಚಂದ್ರನ್, ತನ್ನ ಮಗಳೊಂದಿಗೆ ಇಸ್ರೋ ಘಟಕಕ್ಕೆ ಉಪಕರಣಗಳನ್ನು ಸಾಗಿಸುವ ಬೃಹತ್ ಟ್ರೈಲರ್ ಚಲನೆಯನ್ನು ವೀಕ್ಷಿಸಲು ಇಲ್ಲಿನ ಅಟ್ಟಿಂಗಲ್ ಬಳಿಯ ಹೊರವಲಯದಲ್ಲಿರುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ವೇಳೆ ಕೇರಳ ಪೊಲೀಸ್ ಇಲಾಖೆಯ ಪಿಂಕ್ ಪೊಲೀಸ್ ಘಟಕದ ಮಹಿಳಾ ಪೊಲೀಸ್ ಅಧಿಕಾರಿ ರೆಜಿತಾ ಅವರ ಮೊಬೈಲ್ ಕಳೆದುಹೋಗಿತ್ತು. ಮೊಬೈಲ್ ಕಳೆದು ಹೋಗುವ ಮುನ್ನ ರೆಜಿತಾ ಅವರಿದ್ದ ಗಸ್ತುವಾಹನ ಪಕ್ಕದಲ್ಲೇ ಜಯಚಂದ್ರನ್ ಇದ್ದಿದ್ದರಿಂದ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದರು. ಸ್ವಲ್ಪವೂ ಯೋಚಿಸದೇ ಮೊಬೈಲ್ ಕದ್ದಿರುವುದು ಇವರೇ ಎಂದು ಭಾವಿಸಿದ ರೆಜಿತಾ, ಸಾರ್ವಜನಿಕರ ಎದುರಲ್ಲೇ ಬಾಲಕಿ ಮತ್ತು ಆಕೆಯ ತಂದೆಗೆ ಕೆಟ್ಟ ಪದಗಳಿಂದ ಅವಮಾನಿಸಿದರು. ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದರು. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದರು. ಇದಾದ ಬಳಿಕ ರೆಜಿತಾ ಅವರ ಮೊಬೈಲ್ ಪೊಲೀಸ್ ವಾಹನದಲ್ಲೇ ಪತ್ತೆಯಾಯಿತು. ಇದಿಷ್ಟು ಘಟನೆಯನ್ನು ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಸಹ ಆಗಿತ್ತು.
ಇದಾದ ಬಳಿಕ ತಮಗಾದ ಅವಮಾನಕ್ಕೆ ನ್ಯಾಯ ಕೇಳಬೇಕೆಂದು ಆಗಸ್ಟ್ 31ರಂದು ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಬಳಿ ತೆರಳಿ ಮಹಿಳಾ ಪೊಲೀಸ್ ಅಧಿಕಾರಿ ರೆಜಿತಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಯಚಂದ್ರನ್ ದೂರು ನೀಡಿದ್ದರು. ಸಾರ್ವಜನಿಕವಾಗಿ ನನ್ನ ಮಗಳನ್ನು ಅವಮಾನಿಸಿದ್ದರಿಂದ ಅವಳು ಆಘಾತಕ್ಕೆ ಒಳಗಾಗಿ ಖಿನ್ನತೆಗೆ ಜಾರಿದ್ದಾಳೆ ಎಂದು ಜಯಚಂದ್ರನ್ ದೂರು ನೀಡಿದ್ದರು. ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅನಿಲ್ ಕಾಂತ್ ಭರವಸೆ ನೀಡಿ, ತನಿಖೆಗೆ ಆದೇಶ ನೀಡಿದ್ದರು. ಆದರೆ, ರೆಜಿತಾ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಒಳ್ಳೆಯ ಜಾಗಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಾಕಷ್ಟು ಮನವಿ ಮತ್ತು ದೂರುಗಳನ್ನು ನೀಡಿದರೂ ಜಯಚಂದ್ರನ್ ಕುಟುಂಬಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೊನೆಗೆ ನ್ಯಾಯಾಲಯ ಮೆಟ್ಟಿಲೇರಿದ ಕುಟುಂಬ, ರೆಜಿತಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಕೋರ್ಟ್ ತರಾಟೆ
ಮಹಿಳಾ ಅಧಿಕಾರಿಯನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಬಾಲಕಿ 50 ಲಕ್ಷ ರೂ. ಪರಿಹಾರ ಕೊಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಳು. ಹಿರಿಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಮಹಿಳಾ ಪೊಲೀಸ್ ಮೇಲೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಬಾಗಿಲಿಗೆ ಬಂದಿದ್ದೇವೆ. ಸಾರ್ವಜನಿಕರ ಎದುರು ಅವಮಾನಿಸಿದ ಆಘಾತದಿಂದ ಖಿನ್ನತೆಗೆ ಜಾರಿ ಆಪ್ತ ಸಮಾಲೋಚನೆಯನ್ನು ಪಡೆದಿದ್ದೇನೆ. ಈಗಲೂ ಮಹಿಳಾ ಅಧಿಕಾರಿಯ ಚುಚ್ಚು ಮಾತುಗಳು ತೀವ್ರ ನೋವುಂಟು ಮಾಡುತ್ತಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಬಾಲಕಿ ಉಲ್ಲೇಖಿಸಿದ್ದಳು. ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್, ತಪ್ಪಿತಸ್ಥ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ತೆಗೆದುಕೊಂಡ ಕ್ರಮವನ್ನು ತಿಳಿಸುವಂತೆ ಪೊಲೀಸ್ ಇಲಾಖೆಗೆ ಕೋರಿತು ಮತ್ತು ಇದನ್ನು ‘ಸಣ್ಣ’ ಘಟನೆ ಎಂದು ಸುಮ್ಮನಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು. ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಮಹಿಳಾ ಅಧಿಕಾರಿ ಆ ಚಿಕ್ಕ ಬಾಲಕಿಗೆ ಮನಸ್ಸಿಗೆ ನೋವುಂಟು ಮಾಡುವಂತೆ ನಡೆದುಕೊಂಡಿಲ್ಲ. ಅನುಚಿತವಾಗಿ ವರ್ತನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವರದಿ ನೀಡಿತು. ಅದಕ್ಕೆ ಸಾಕ್ಷಿ ಎಂಬಂತೆ ನಾಲ್ವರು ಸಾಕ್ಷಿಗಳನ್ನು ಕೂಡಾ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಹಾಗೆಯೇ ಆ ಮಗುವಿಗೆ ಪರಿಹಾರವನ್ನು ನಿರಾಕರಣೆ ಮಾಡಿತ್ತು. ಮಗು ಅವಮಾನದಿಂದ ಅಳಲಿಲ್ಲ. ಜನರು ಸೇರಿದ್ದನ್ನು ನೋಡಿ ಅತ್ತಿದೆ ಎಂದು ಸರ್ಕಾರವು ಸಮರ್ಥನೆ ನೀಡಿತ್ತು.
ಸರ್ಕಾರದ ಹೇಳಿಕೆಯಿಂದ ಆಕ್ರೋಶಗೊಂಡ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತು. ಬಾಲಕಿ ಹಾಗೂ ಆಕೆಯ ತಂದೆಯ ವಿಚಾರದಲ್ಲಿ ಬೇಜವಬ್ದಾರಿಯುತವಾಗಿ ನಡೆದುಕೊಂಡು ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳುವಂತೆ ಹಾಗೂ 1.5 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಸರ್ಕಾರಕ್ಕೆ ಆದೇಶಿಸಿದರು. (ಏಜೆನ್ಸೀಸ್)
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಅಂದು ಯುದ್ಧ ಗೆದ್ದ ಹೀರೋ, ಈಗ ದಿವಾಳಿ ತಂದ ವಿಲ್ಲನ್
ಭಾರತ ಇಸ್ಲಾಮಿಕ್ ಭಾರತದ ಆಡಳಿತ ಕಡೆಗೆ! ಬಿಹಾರದಲ್ಲಿ ಸಿಕ್ಕಿಬಿದ್ದ ಉಗ್ರರಿಬ್ಬರ ಭಯಾನಕ ಸಂಚು ಬಯಲು
16 ವರ್ಷದ ಹಿಂದು ಹುಡುಗಿ ಅಪಹರಿಸಿ ಮುಸ್ಲಿಂ ವ್ಯಕ್ತಿಯ ಜತೆ ಬಲವಂತದ ಮದ್ವೆ: ಪಾಕ್ನಲ್ಲಿ ಹಿಂದುಗಳ ಪ್ರತಿಭಟನೆ