ಹೈದರಾಬಾದ್: ಆಂಧ್ರಪ್ರದೇಶದ ಏಳೂರು ಕ್ಷೇತ್ರದ ಮಾಜಿ ಸಂಸದ ಮಗಂತಿ ವೆಂಕಟೇಶ್ವರ ರಾವ್ ಪುತ್ರ ಹೈದರಾಬಾದ್ನ ಬಂಜಾರ ಹಿಲ್ಸ್ನ ಹಯಾಟ್ ಪ್ಲೇಸ್ ಹೋಟೆಲ್ನಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಾಜಿ ಸಂಸದರ ಪುತ್ರ ಮಗಂತಿ ರವೀಂದ್ರನಾಥ್ ಚೌಧರಿ ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ರವೀಂದ್ರನಾಥ್ ಹೈದರಾಬಾದ್ನ ಕೊಕಪೇಟೆಯ ನಿವಾಸಿ. ಇವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಬಹುದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ನಗರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸೇರಿಕೊಂಡಿದ್ದರು.
ಏಪ್ರಿಲ್ 28ರಿಂದ ರವೀಂದ್ರನಾಥ್ ಹೋಟೆಲ್ನಲ್ಲಿ ತಂಗಿದ್ದರು. ಜೂನ್ 1ರಂದು ಹೋಟೆಲ್ನಿಂದ ಖಾಲಿ ಮಾಡುವುದಾಗಿ ಹೇಳಿದ್ದರು. ಆದರೆ, ಆಗಿದ್ದೇ ಬೇರೆ. ಅದೇ ದಿನ ಸಂಜೆ ಹೋಟೆಲ್ ಸಿಬ್ಬಂದಿ ರವೀಂದ್ರನಾಥ್ಗೆ ನೆನಪು ಮಾಡಲು ಹೋದಾಗ ಕೋಣೆ ಬಾಗಿಲು ಮುಚ್ಚಿತ್ತು. ಎಷ್ಟು ಬಾಗಿಲು ಬಡಿದರು ಪ್ರತಿಕ್ರಿಯೆ ನೀಡದಿದ್ದಾಗ ಹೋಟೆಲ್ ಸಿಬ್ಬಂದಿ ತದನಂತರದಲ್ಲಿ ಬಂಜಾರ ಹಿಲ್ಸ್ ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದುಕೊಂಡು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಗಡೆ ನುಗ್ಗಿದಾಗ ರವೀಂದ್ರನಾಥ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಆದರೆ, ದೇಹದಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಬಹುಶಃ ಅನಾರೋಗ್ಯ ಸಮಸ್ಯೆಯಿಂದಲೇ ಮೃತಪಟ್ಟಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಆದರೂ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ರವೀಂದ್ರನಾಥ್ ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದ್ದು, ಕುಟುಂಬ ಸದಸ್ಯನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)
ರಾಜ್ಯದ ಪಾಲಿಗೆ ಕಹಿ ಸುದ್ದಿ: KSRTC ಹೆಸರು, ಲೋಗೋ ಕಳೆದುಕೊಳ್ಳಲಿದೆ ಕರ್ನಾಟಕ!
ಐಪಿಎಲ್ ಭಾಗ-2ಕ್ಕೆ ಆಗಮಿಸದಿದ್ದರೆ ವಿದೇಶಿ ಆಟಗಾರರಿಗೆ ಕಾದಿದೆ ಶಾಕ್..!