ವಿಜಯವಾಡ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸಾನಿ ಚಂಡಮಾರುತದಿಂದ ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಕಡಲ ಮೊರೆತ ಹೆಚ್ಚಾಗಿದ್ದು, ಎರಡು ದಿನಗಳ ಹಿಂದೆ ಚಂಡಮಾರುತಕ್ಕೆ ಸಿಲಕಿ ನಿಗೂಢ ರಥವೊಂದು ಸಮುದ್ರದಲ್ಲಿ ತೇಲಿಬಂದಿತ್ತು. ಶ್ರೀಕಾಕುಳಂ ಕರಾವಳಿ ಪ್ರದೇಶದಲ್ಲಿ ಕಂಡುಬಂದು ರಥವನ್ನು ಚಿನ್ನದಿಂದ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿ, ನೋಡಿದವರೆಲ್ಲ ಹುಬ್ಬೇರಿಸಿದ್ದರು.
ಅನೇಕರು ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡು, ಚಿನ್ನದಿಂದ ಮಾಡಲ್ಪಟ್ಟ ರಥವೂ ಕರಾವಳಿಯಲ್ಲಿ ಪತ್ತೆಯಾಗಿದೆ. ಅಸಾನಿ ಚಂಡಮಾರುತದಿಂದ ಚಿನ್ನದ ರಥ ಆಂಧ್ರದ ಶ್ರೀಕಾಕುಳಂನ ಸಂತಬೊಮ್ಮಲಿ ಮಂಡಲದ ಸುನ್ನಪಲ್ಲಿಯ ಕರಾವಳಿಯಲ್ಲಿ ತೇಲಿಬಂದಿದೆ. ರಥವು ಮಠದ ಆಕಾರದಲ್ಲಿದೆ. ಥಾಯ್ಲೆಂಡ್ ಅಥವಾ ಮಯಾನ್ಮಾರ್ನಿಂದ ಆಂಧ್ರಕ್ಕೆ ತೇಲಿಬಂದಿರಬಹುದೆಂದು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
ಆದರೆ, ವಿಡಿಯೋ ಅಸಲಿಯತ್ತಿನ ಬಗ್ಗೆ ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಮಹತ್ವದ ಮಾಹಿತಿಯೊಂದ ಬೆಳಕಿಗೆ ಬಂದಿದೆ. ಮೇ 10ರಂದು ಶ್ರೀಕಾಕುಳಂನ ಸುನ್ನಪಲ್ಲಿಯ ಕರಾವಳಿಯಲ್ಲಿ ರಥ ತೇಲಿಬಂದಿರುವುದು ನಿಜ. ಆದರೆ, ಅದು ಚಿನ್ನದ ರಥವಲ್ಲ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ.
ಶ್ರೀಕಾಕುಳಂ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಐಎಎಸ್ ಅಧಿಕಾರಿ ಶ್ರೀಕೇಶ್ ಬಿ ಲತಾಕರ್ ಅವರನ್ನು ಇಂಡಿಯಾ ಟುಡೆ ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದೆ. ಲತಾಕರ್ ಹೇಳುವ ಪ್ರಕಾರ ರಥವನ್ನು ಚಿನ್ನದಿಂದ ಮಾಡಿಲ್ಲ. ಆದರೆ, ಚಿನ್ನದ ಬಣ್ಣವನ್ನು ಲೇಪನ ಮಾಡಲಾಗಿದೆ. ಸದ್ಯ ರಥವು ಸ್ಥಳೀಯ ಪೊಲೀಸರ ವಶದಲ್ಲಿ ಇದೆ ಎಂದಿದ್ದಾರೆ.
ಮತ್ತಷ್ಟು ಮಾಹಿತಿ ಪಡೆದುಕೊಳ್ಳಲು ಇಂಡಿಯಾ ಟುಡೆ ತಂಡ ಶ್ರೀಕಾಕುಳಂ ತೆಕ್ಕಲಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪ್ರತ್ಯಕ್ಷದರ್ಶಿ ವೆಂಕಟ ಗಣೇಶ್ ಅವರನ್ನು ಸಂಪರ್ಕಿಸಿತು. ಈ ವೇಳೆ ಮಾತನಾಡಿದ ಅವರು ರಥದಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ರಥವನ್ನು ಸ್ಟೀಲ್ ಮತ್ತು ಮರದಿಂದ ಮಾಡಲಾಗಿದ್ದು, ಚಿನ್ನದ ಬಣ್ಣವನ್ನು ಲೇಪನ ಮಾಡಲಾಗಿದೆ ಎಂದು ತಿಳಿಸಿದರು. ಬಾಂಬ್ ಸ್ಕ್ವಾಡ್ ಅನ್ನು ಕರೆಸಿ ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದರು.
ಆದರೆ, ಈ ರಥ ಎಲ್ಲಿಂದ ಬಂತು ಎಂಬುದು ಜಿಲ್ಲಾಡಳಿತಕ್ಕೆ ಇನ್ನೂ ಖಚಿತವಾಗಿಲ್ಲ. ರಥದ ಮೇಲೆ ಕೆಲವು ಶಾಸನಗಳಿವೆ. ಅವುಗಳನ್ನು ಅರ್ಥೈಸಿಕೊಳ್ಳಲು ತಜ್ಞರ ನೆರವು ಪಡೆಯುತ್ತಿದ್ದೇವೆ. ಇದು ನಮಗೆ ಕೆಲವು ಸುಳಿವು ನೀಡಬಹುದು ಎಂದು ಜಿಲ್ಲಾಧಿಕಾರಿ ಲತಾಕರ್ ಹೇಳಿದರು.
ಕೊನೆಯದಾಗಿ ಆಂಧ್ರದ ಕರಾವಳಿಯಲ್ಲಿ ತೇಲಿಬಂದ ರಥ ಚಿನ್ನದ ರಥವಲ್ಲ. ಅದನ್ನು ಚಿನ್ನದಿಂದ ಮಾಡಿಲ್ಲ. ಕೇವಲ ಚಿನ್ನದ ಬಣ್ಣವನ್ನು ಲೇಪನ ಮಾಡಲಾಗಿದೆಯಷ್ಟೇ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ. (ಏಜೆನ್ಸೀಸ್)
#WATCH | Andhra Pradesh: A mysterious gold-coloured chariot washed ashore at Sunnapalli Sea Harbour in Srikakulam y'day, as the sea remained turbulent due to #CycloneAsani
SI Naupada says, "It might've come from another country. We've informed Intelligence & higher officials." pic.twitter.com/XunW5cNy6O
— ANI (@ANI) May 11, 2022
ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಇಬ್ಬರು ವರರಿಂದ ಕೆಟ್ಟ ಬೇಡಿಕೆ: ಮಂಟಪದಿಂದ ಸೀದಾ ಠಾಣೆಗೆ ಹೋದ ಅಕ್ಕ-ತಂಗಿ
ಒಳಉಡುಪು ಕಾಣಿಸುವಂತಹ ಪಾರದರ್ಶಕ ಬಟ್ಟೆ ಧರಿಸಿ ಬಂದು ಮುಜುಗರಕ್ಕೀಡಾದ ಶ್ರುತಿ! ವಿಡಿಯೋ ವೈರಲ್
ನಾವು ಮಾಡಬೇಕಾದ್ದನ್ನು ರಮ್ಯಾ ಮಾಡಿ ತೋರಿಸಿದ್ದಾಳೆ: ಮಾಜಿ ಸಂಸದೆಗೆ ಬಹುಪರಾಕ್