ಬೆಂಗಳೂರು: ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಾಹಾಮಾರಿ ಕರೊನಾ ವೈರಸ್ ಸೋಂಕು ಯಾವತ್ತು ಕೊನೆಯಾಗಲಿದೆ ಎಂದು ಜನರು ಆಶಾ ಭಾವನೆಯಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ದೇಶದಲ್ಲಿ ಲಕ್ಷಾಂತರ ಮಂದಿ ಕರೊನಾ ಮೃತ್ಯು ಕೂಪಕ್ಕೆ ಬಲಿಯಾಗಿದ್ದಾರೆ. ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿರುವಾಗ ಪ್ರಖ್ಯಾತ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ನುಡಿದಿರುವ ಮಹಾಭವಿಷ್ಯ ಭರವಸೆಯ ನಾಳೆಯನ್ನು ಹುಟ್ಟುಹಾಕಿದೆ.
ಇಂದು ಮಾಧ್ಯಮದವರ ಜತೆ ಮಾತನಾಡಿದ ದ್ವಾರಕಾನಾಥ್ ಗುರೂಜಿ, ಜ್ಯೋತಿಷ್ಯ ಹೇಳಿದರೆ ಯಾರ ಮಾತನ್ನು ಯಾರೂ ಕೇಳುವುದಿಲ್ಲ. 2017ರ ಜನವರಿಯಿಂದಲೂ ಪ್ರತಿ ಬಾರಿ ಎಚ್ಚರಿಕೆ ಕೊಡುತ್ತಾ ಬಂದಿದ್ದೇನೆ. ಪ್ರತಿ ಟಿವಿ ಸಂದರ್ಶನದಲ್ಲೂ ಹೇಳಿದ್ದೇನೆ. ಪ್ರಧಾನಿ ಮೋದಿ ಅವರಿಗೆ ಸಂಕಟ ಎದುರಾಗಲಿದೆ ಎಂದು ಎಚ್ಚರಿಸಿದ್ದೆ. ನನ್ನ ಮಾತನ್ನೂ ಯಾರು ಕೇಳಲಿಲ್ಲ ಎಂದರು.
ಸದ್ಯ ಎದುರಾಗಿರುವ ಸಂಕಷ್ಟದಿಂದ ನಮ್ಮನ್ನು ಪಾರು ಮಾಡಲು ಗಾಣಗ ದತ್ತಾತ್ರೇಯ ಸ್ವಾಮಿ ಒಬ್ಬರಿಂದಲೇ ಸಾಧ್ಯ. ಪ್ರಧಾನಿ ಮೋದಿ ಭೇಟಿ ಮಾಡಬೇಕು ಎಂದು ಹೇಳಿದ್ದೆ. ಆದರೆ, ಅವರು ಬರಲಿಲ್ಲ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಮುಂತಾದ ಕಡೆ ಹೋದರು. ಆದರೆ, ರಾಜ್ಯಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೊರೆ ಮತ್ತು ಪ್ರಜೆಗಳ ಪಾಪದ ಕೆಲಸವೇ ಇಂದಿನ ಸಮಸ್ಯೆಗೆ ಕಾರಣ. ಭಗವಂತನಿಗೆ ಶರಣಾದರೆ ಮಾತ್ರ ನಾವು ಉಳಿಯುತ್ತೇವೆ. ಇಂದಿನ ಸ್ಥಿತಿ ನೋಡಿ ನನಗೆ ದುಃಖವಾಗುತ್ತಿದೆ. ಜೂನ್ ಒಂದನೇ ತಾರೀಖಿನಿಂದ ಸೋಂಕು ಕಡಿಮೆ ಆಗುತ್ತದೆ. ಆದರೆ, ಸಮೃದ್ಧ ಭಾರತ ಕರೊನ ಮುಕ್ತವಾಗಲೂ 2023ರ ಜನವರಿವರೆಗೆ ಕಾಯಲೇಬೇಕು ಎಂದರು.
ಈ ಸಮಯದಲ್ಲಿ ಚುನಾವಣೆಯನ್ನು ನಡೆಸಬಾರದಿತ್ತು. ಅದರಿಂದಲೇ ಇಂದು ಈ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕರೊನಾ ವಿಚಾರದಲ್ಲಿ ಸರ್ಕಾರದಲ್ಲೂ ಅನೇಕ ಗೊಂದಲಗಳಿವೆ. ಐದು ಜನರಿಗೆ ಕರೊನಾ ಜವಾಬ್ದಾರಿ ಕೊಟ್ಟರೆ, ಜನರು ಯಾರ ಬಳಿ ಹೋಗಬೇಕು. ಸಿಎಂ ಆ ಬಗ್ಗೆ ನಿರ್ಧಾರ ಮಾಡಬೇಕೆಂದು ಹೇಳಿದರು. (ದಿಗ್ವಿಜಯ ನ್ಯೂಸ್)