ಚೆಂಗನ್ನೂರು: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಕೇರಳದ 50 ವರ್ಷದ ವ್ಯಕ್ತಿಯೊಬ್ಬ ತನ್ನ ಸಾಲದ ಹಣವನ್ನು ತೀರಿಸಲು ಇನ್ನೇನು ಮನೆ ಮಾರಾಟ ಮಾಡಬೇಕು ಅಷ್ಟರಲ್ಲಿ 1 ಕೋಟಿ ರೂಪಾಯಿ ಬಂಪರ್ ಲಾಟರಿ ಹೊಡೆದಿದೆ. ಈ ವಿಚಾರ ಕೇಳಿದ ನೆರೆಮನೆಯವರು ಅದೃಷ್ಟ ಅಂದ್ರೆ ಹೀಗಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ವಿವರಣೆಗೆ ಬರುವುದಾರೆ, ವೃತ್ತಿಯಲ್ಲಿ ಪೇಂಟರ್ ಆಗಿರುವ ಕೋಯಿಕ್ಕೋಡ್ ಮೂಲದ ಮೊಹಮ್ಮದ್ ಬಾವಾ, ಕೇವಲ 8 ತಿಂಗಳ ಹಿಂದಷ್ಟೇ ಹೊಸ ಮನೆಯನ್ನು ಕಟ್ಟಿಸಿದ್ದ. ಬಾವಾ ಕುಟುಂಬಕ್ಕೆ ಇರುವುದು ಇದೊಂದೆ ಆಸ್ತಿ. ಬಾವಾ ಮತ್ತು ಆತನ ಪತ್ನಿಗೆ ಐವರು ಮಕ್ಕಳಿದ್ದಾರೆ. ಅದರಲ್ಲಿ ನಾಲ್ವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ. ಇಬ್ಬರು ಹಿರಿಯ ಹೆಣ್ಣು ಮಕ್ಕಳು ಮದುವೆಯಾಗಿದ್ದು, ಉಳಿದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.
ಮನೆ ನಿರ್ಮಾಣ ಹಾಗೂ ಮಕ್ಕಳ ಮದುವೆಗೆಂದು ಸಾಲ ಮಾಡಿದ್ದ ಬಾವಾ, ಸಾಲದ ಸುಳಿಯಲ್ಲಿ ಸಿಲುಕಿದ್ದ. ಬ್ಯಾಂಕ್ ಮತ್ತು ಸಂಬಂಧಿಕರಿಂದ ಸುಮಾರು 50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಕತಾರ್ನಲ್ಲಿರುವ ಮಗನಿಗೆ ಹಣ ಕಳುಹಿಸಲು ಸಾಲಾ ಮಾಡಿದ್ದ. ಗೆಳೆಯರು ಯಾರೂ ಸಹಾಯಕ್ಕೆ ಬಾರದ ಕಾರಣ ಜಾಕ್ ಪಾಟ್ ಹೊಡೆಯಬಹುದೆಂಬ ನಿರೀಕ್ಷೆಯಲ್ಲಿ ಬಾವ ಹೊಸ ಅಂಗಡಿಯ ಏಜೆನ್ಸಿಯೊಂದರಿಂದ ಲಾಟರಿ ಟಿಕೆಟ್ ಖರೀದಿಸುತ್ತಲೇ ಇದ್ದ.
ಇತ್ತ ಸಾಲಗಾರರ ಕಾಟ ಹೆಚ್ಚಾದ್ದರಿಂದ ತನ್ನ 2000 ಚದರ ಅಡಿಯಲ್ಲಿ ನಿರ್ಮಿಸಿದ್ದ ಕನಸಿನ ಮನೆಯನ್ನು 40 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದ. ಅದರಂತೆ ಸೋಮವಾರ ಮುಂಗಡ ಹಣವನ್ನೂ ಪಡೆದಿದ್ದ. ಮಕ್ಕಳನ್ನು ಕರೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸಲು ಮುಂದಾಗಿದ್ದ. ಇನ್ನು ಒಂದು ಗಂಟೆಯಲ್ಲಿ ಮನೆ ಮಾರಾಟವಾಗಬೇಕು ಎನ್ನುವಷ್ಟರಲ್ಲಿ ಬಾವಾ ಅವರಿಗೆ 1 ಕೋಟಿ ರೂಪಾಯಿ ಬಂಪರ್ ಲಾಟರಿ ಹೊಡೆದಿದೆ. ಕಷ್ಟದಲ್ಲಿದ್ದ ಕುಟುಂಬಕ್ಕೆ ಅದೃಷ್ಟ ಖುಲಾಯಿಸಿದೆ.
ತೆರಿಗೆಯಲ್ಲ ಕಳೆದ ಬಾವಾ ಕೈಗೆ 63 ಲಕ್ಷ ರೂಪಾಯಿ ಸಿಕ್ಕಿದೆ. ಮನೆ ಕೊಳ್ಳಲು ಸಂಜೆ ಬಾವಾರ ಮನೆಯ ಬಳಿ ಬಂದ ರಿಯಲ್ ಎಸ್ಟೇಟ್ ಬ್ರೋಕರ್ಗೆ ಹಣ ಹಿಂತಿರುಗಿಸಿ, ಮನೆ ಮಾರುವುದಿಲ್ಲ ಎಂದಿದ್ದಾರೆ. ಲಾಟರಿ ಹೊಡೆದಿದ್ದನ್ನು ಕೇಳಿ ಏನು ಹೇಳಬೇಕು ನಿಮ್ಮ ಅದೃಷ್ಟಕ್ಕೆ ಅಂತಾ ಹುಬ್ಬೇರಿಸಿದ್ದಾರೆ. ನಿಜಕ್ಕೂ ಇದೊಂದು ಅದ್ಭುತವೇ ಸರಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ಬಿಜೆಪಿ ಯುವ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ವಾರದ ಹಿಂದೆ ನಡೆದ ಕೊಲೆ ರಿವೇಂಜ್?
19 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಎನ್ಕೌಂಟರ್ಗೆ ಬಲಿ
ಏನಾಯ್ತು ರಾಕಿ ಭಾಯ್ಗೆ? ಯಾಕಿಷ್ಟು ಸೈಲೆಂಟ್ ಆಗಿದ್ದಾರೆ? ಆದಷ್ಟು ಬೇಗ ಯಶ್ ಇದನ್ನು ಮಾಡಲೇಬೇಕಿದೆ….