ಚಾಮರಾಜನಗರ: ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಪುಟ್ಟಸ್ವಾಮಿ ಅವರ ದಿಢೀರ್ ವರ್ಗಾವಣೆಯನ್ನು ವಿರೋಧಿಸಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪುಟ್ಟಸ್ವಾಮಿ ಅವರನ್ನು ಮೈಸೂರು ಜಿಲ್ಲೆಯ ಡಿ.ಸಿ.ಆರ್.ಬಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅವರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವುದರಿಂದ ಇದೊಂದು ರಾಜಕೀಯ ಪ್ರೇರಿತ ವರ್ಗಾವಣೆ ಎಂದು ಹೇಳಲಾಗಿದೆ. ಇದರ ಹಿಂದೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್ . ನಂಜುಂಡಸ್ವಾಮಿ ಹಾಗೂ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಕೈವಾಡ ಇದೆ ಎಂದು ಪುಟ್ಟಸ್ವಾಮಿ ಅಭಿಮಾನಿಗಳು ಆರೋಪ ಮಾಡಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟಸ್ವಾಮಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ವರ್ಗಾವಣೆ ಅಸ್ತ್ರ ನಿಮ್ಮನ್ನೆ ಸುಟ್ಟು ಭಸ್ಮ ಮಾಡುವ ಕಾಲ ಸನ್ನಿಹಿತವಾಗಿದೆ. ತರಗೆಲೆಗಳಂತೆ ತೂರಿ ಹೋಗುತ್ತೀರಿ ಎಂದು ಕಿಡಿಕಾರಿದ್ದಾರೆ.
ರಾಜಕೀಯ ಅಧಿಕಾರ ಅಮಲಿನಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮತ್ತು ಈ ವರ್ಗಾವಣೆಗೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ ಕುಮ್ಮಕ್ಕು ನೀಡಿದ್ದು, ಒಬ್ಬ ದಕ್ಷ, ಪ್ರಾಮಾಣಿಕ, ಜನಾನುರಾಗಿ, ಬಡವರ ಬಂಧು, ಯುವಕರ ಆಶಾಕಿರಣ ಹಾಗೂ ಯೂತ್ ಐಕಾನ್ ಬಿ.ಪುಟ್ಟಸ್ವಾಮಿ ಅವರನ್ನು ಚಾಮರಾಜನಗರ ಗ್ರಾಮಾಂತರ ಠಾಣೆಯಿಂದ ವರ್ಗಾವಣೆ ಮಾಡಿಸಿರುವುದು ರಾಜಕೀಯ ಪ್ರೇರಿತವಾಗಿದೆ.
ತನ್ನದೇ ಸಮುದಾಯದ ಉತ್ಸಾಹಿ ಯುವ ಪೋಲಿಸ್ ಅಧಿಕಾರಿಯನ್ನು ರಾಜಕೀಯದ ಅಧಿಕಾರದ ಆಸೆಗಾಗಿ, ಹಣದಾಸೆಗಾಗಿ ವರ್ಗಾವಣೆ ಮಾಡಿಸಿರುವುದು ನಾಚಿಕೆಗೇಡಿನ ಸಂಗತಿ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ 2023ನೇ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ, ಬಿ.ಪುಟ್ಟಸ್ವಾಮಿ ಅವರನ್ನು ವರ್ಗಾವಣೆ ಮಾಡಿಸಲು ಸತತ 6-7 ತಿಂಗಳು ಪ್ರಯತ್ನ ಪಡುತ್ತಿದ್ದರು. ಇಂದು ನಿಮ್ಮ ಗುರಿಯನ್ನು ಸಾಧಿಸಿದ್ದೀರಿ. ನೀವು ಬರಿ ಗುರಿಯನ್ನು ಮಾತ್ರ ಮುಟ್ಟಿದ್ದೀರಿ ಆದರೆ, ಗೆಲುವು ಮಾತ್ರ ಬಿ.ಪುಟ್ಟಸ್ವಾಮಿ ಅವರದು ಎಂದು ತಿಳಿಯದೇ ಹೋದರಲ್ಲ ಮೂಢರೇ, ನಿಮ್ಮ ವರ್ಗಾವಣೆ ಎಂಬ ಅಸ್ತ್ರ ನಿಮ್ಮನ್ನೇ ಸುಟ್ಟು ಭಸ್ಮ ಮಾಡುವ ಕಾಲ ಸನ್ನಿಹಿತವಾಗಿದೆ. ಸಿದ್ಧರಾಗಿ ಬಿ.ಪುಟ್ಟಸ್ವಾಮಿ ರವರು ಬಿಡುವ ಒಂದೊಂದು ಅಸ್ತ್ರಕ್ಕೂ ನೀವು ತರಗೆಲೆಯಂತೆ ತೂರಿ ಹೋಗುತ್ತೀರಿ. ಪುಟ್ಟಸ್ವಾಮಿ ಅವರು ರಾಜಕೀಯಕ್ಕೆ ಬರುತ್ತಾರೊ? ಇಲ್ಲವೋ? ಎಂದು ಎಲ್ಲಾ ಅಭಿಮಾನಿಗಳು ಯೋಚನೆ ಮಾಡುತ್ತಾ ಕುಳಿತಿದ್ದರು. ಇದೀಗ ನೀವೇ ಕೆಣಕಿ ನಿಮ್ಮ ಸೋಲನ್ನು ತಂದುಕೊಂಡಿದ್ದೀರಿ. ಬಹಳ ಕೀಳು ಮಟ್ಟದ ರಾಜಕೀಯ ಮಾಡುವ ನಿಮಗೆ ನಿಮ್ಮ ಘನತೆಗೆ ಏನೆಂದು ಕರೆಯಬೇಕು. ನಿಮ್ಮೆಲ್ಲರ ಹೊಟ್ಟಿಕಿಚ್ಚು ನಿಮ್ಮನ್ನೇ ಸುಡುತ್ತದೆ ಎಂದು ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗ, ಬಿ.ಪುಟ್ಟಸ್ವಾಮಿ ಸೇವಾ ಟ್ರಸ್ಟ್ ಎಂಬ ಫೇಸ್ಬುಕ್ ಪೇಜ್ಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಜಾವಲಿನ್ ಥ್ರೋ ಫೈನಲ್ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ
ತಮಿಳುನಾಡಿನಿಂದ ಬಸ್ನಲ್ಲಿ ಬಂದು ಡಿಯೋ ಬೈಕ್ಗಳನ್ನೇ ಕದಿಯುತ್ತಿದ್ದ ಖದೀಮರ ಗ್ಯಾಂಗ್ ಸಿಕ್ಕಿಬಿದ್ದಿದ್ದೇ ರೋಚಕ!
ಬಿಜೆಪಿ ಪ್ರಭಾವಿಗಳೇ ಕಾಂಗ್ರೆಸ್ ಟಾರ್ಗೆಟ್; ಪ್ರಮುಖರ ಕಟ್ಟಿಹಾಕಲು ಕಾರ್ಯತಂತ್ರ