ಕೊಚ್ಚಿ: ಹುಟ್ಟು ಉಚಿತ ಸಾವು ಖಚಿತ ಎಂಬ ಮಾತು ಅಕ್ಷರಶಃ ಸತ್ಯ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು. ಇದು ವಿಧಿಬರಹವೂ ಹೌದು. ಆದರೆ, ಆ ಸಾವು ಯಾವಾಗ? ಹೇಗೆ? ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವೊಬ್ಬರು ಸದ್ದಿಲ್ಲದೆ ಪ್ರಾಣ ಬಿಟ್ಟರೆ, ಇನ್ನು ಕೆಲವರ ಸಾವು ಘನ ಘೋರವಾಗಿರುತ್ತದೆ. ಅದೇ ರೀತಿಯ ಸಾವಿನ ಪ್ರಕರಣವೊಂದು ಇದೀಗ ಕೇರಳದಿಂದ ವರದಿಯಾಗಿದೆ. ನಿಜಕ್ಕೂ ಈ ವಿಡಿಯೋ ನೋಡಿದ್ರೆ ಸಾವಿನ ಬಗ್ಗೆ ನಿಮ್ಮ ವ್ಯಾಖ್ಯಾನವೇ ಬದಲಾಗಬಹುದು.
ಬೆಟ್ಟದ ಮೇಲಿಂದ ಉರುಳಿದ ಬಂಡೆಯೊಂದು ಸರಿಯಾಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ದುರಾದೃಷ್ಟಕರ ಘಟನೆ ಏಪ್ರಿಲ್ 16ರಂದು ಥಾಮರಸ್ಸೆರಿಯಲ್ಲಿ ನಡೆದಿದೆ. ಅಭಿನವ್ ಮತ್ತು ಅನೀಶ್ ಎಂಬುವರು ಥಾಮರಸ್ಸೆರಿ ಘಾಟ್ ರಸ್ತೆಯಲ್ಲಿ ಬೈಕ್ನಲ್ಲಿ ಪ್ರವಾಸ ಮಾಡುತ್ತಿದ್ದರು. ಈ ವೇಳೆ ದಿಢೀರನೇ ಬೆಟ್ಟದಿಂದ ಕೆಳಗೆ ಜಾರಿದ ಬಂಡೆಯೊಂದು ನೇರವಾಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರ ಸಮೇತ ಬೈಕ್ ಕಣಿವೆಯೊಳಗೆ ಬೀಳುತ್ತದೆ.
ಈ ಅವಘಡದಲ್ಲಿ ಮಲಪ್ಪುರಂ ಜಿಲ್ಲೆಯ ನಿವಾಸಿ ಅಭಿನವ್ (20) ಎಂಬಾತ ದಾರುಣವಾಗಿ ಮೃತಪಟ್ಟರೆ, 21 ವರ್ಷದ ಅನೀಶ್, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಸಂಬಂಧಿಸಿದ ವಿಡಿಯೋವನ್ನು ಅಭಿನವ್ ಮತ್ತು ಅನೀಶ್ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರ ರೆಕಾರ್ಡ್ ಮಾಡಿದ್ದಾರೆ.
ಸುಮಾರು 1 ನಿಮಿಷದ ವಿಡಿಯೋದಲ್ಲಿ ಅಭಿನವ್ ಮತ್ತು ಅನೀಶ್ ಥಾಮರಸ್ಸೆರೆ ಘಾಟ್ ರಸ್ತೆಯ ತಿರುವಿನಲ್ಲಿ ಬೈಕ್ನಲ್ಲಿ ಪ್ರಯಾಣಿಸುವಾಗ ಬಂಡೆಯೊಂದು ಜಾರಿಬಂದು ಬೈಕ್ ಸಮೇತ ತಳ್ಳಿಕೊಂಡು ಹೋಗಿ ಕಣಿವೆಗೆ ಬೀಳುವ ದೃಶ್ಯವಿದ್ದು, ನೋಡುಗನ ಎದೆ ಝಲ್ ಎನಿಸುವಂತಿದೆ. ದುರಾದೃಷ್ಟವಶಾತ್ ಬೈಕ್ ಓಡಿಸುತ್ತಿದ್ದ ಅಭಿನವ್ ಹೆಲ್ಮೆಟ್ ಧರಿಸಿದ್ದರು ಕೂಡ ಸಾವಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಹಿಂಬದಿ ಕುಳಿತಿದ್ದ ಅನೀಶ್ ಹೆಲ್ಮೆಟ್ ಧರಿಸದಿದ್ದರೂ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ.
ವರದಿಗಳ ಪ್ರಕಾರ ಅಭಿನವ್ ಮತ್ತು ಅನೀಶ್ ಅವರನ್ನು ಒಳಗೊಂಡ ಆರು ಜನರ ಗುಂಪು ವಯನಾಡಿಗೆ ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಮಳೆಯಿಂದಾಗಿ ಮರವೊಂದು ಉರುಳಿಬಿದ್ದು, ಸ್ಥಿರವಾಗಿದ್ದ ಬಂಡೆಯ ತನ್ನ ಸ್ಥಳ ಬದಲಾಯಿಸಿ 200 ಅಡಿಯ ಕಣಿವೆಗೆ ಉರುಳಿದೆ. ಹೀಗೆ ಕೆಳಗೆ ಬೀಳುವಾಗ ಅಡ್ಡ ಬಂದ ಬೈಕ್ ಅನ್ನು ಗುದ್ದಿಕೊಂಡು ಹೋಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯಿಂದ ಅಭಿನವ್ ಮತ್ತು ಅನೀಶ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಭಿನವ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅನೀಶ್ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್)
ಬೆಟ್ಟದ ಮೇಲಿಂದ ಉರುಳಿದ ಬಂಡೆಯೊಂದು ಸರಿಯಾಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಥಾಮರಸ್ಸೆರಿಯಲ್ಲಿ ನಡೆದಿದೆ. #Biker #Kerala #BikerDeath #Boulder #Thamarasseryghatroad #PillionRiding pic.twitter.com/NFdbOsntKm
— Vijayavani (@VVani4U) April 30, 2022
ಬೆತ್ತಲೆಯಾಗಿ ಕಾಣಿಸಿಕೊಂಡರಾ ಆಂಡ್ರಿಯಾ ಜರೆಮಿಯ? ಟೀಸರ್ ಬಿಡುಗಡೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಶುರು!
ಬೇರೊಬ್ಬನ ಜತೆ ಮದ್ವೆಯಾಗ್ತಿದ್ದ ಪ್ರೇಯಸಿಯನ್ನು ಮಂಟಪದಲ್ಲೇ ಗುಂಡಿಟ್ಟು ಹತ್ಯೆಗೈದ ಮಾಜಿ ಪ್ರಿಯಕರ
ಹಿಂದು ಎಂಬ ಕಾರಣಕ್ಕೆ ಅಫ್ರಿದಿ ಕೊಟ್ಟ ಕಿರುಕುಳದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪಾಕ್ ಮಾಜಿ ಆಟಗಾರ ಕನೇರಿಯಾ!